Image default
Short Stories

ಗಂಡ-ಹೆಂಡಿರ ಜಗಳ……….

                ಕಮಲೂ ಮತ್ತು ಶ್ರೀಕಂಠೂ ಇಬ್ಬರೂ ಜಗಳ-ವಾಗ್ವಾದ ಶುರು ಮಾಡಿಬಿಟ್ರೂ ಅಂದರೆ ಅದು ಯಾವಾಗ್ಲೂ ಹಾಗೇನೆ…ಚು….ಯಿಂಗ್ ಗಂ ನಂತೆ ಉದ್ದಕ್ಕೆ ರಬ್ಬರಿನ ಹಾಗೆ ಎಳೆದಷ್ಟೂ ಲಂಬಿಸ್ತಾ ಲಂಗುಲಗಾಮಿಲ್ಲದೆ ಎತ್ತೆತ್ಲಾಗೋ ಎಳ್ಕೊಂಡು ಹೋಗ್ಬಿಡ್ತಿತ್ತು. ವಿಷ್ಯ, ಯಾತಕ್ಕೆ ಜಗಳ ಶುರುವಾಯ್ತು ಅನ್ನೋದೇ ಮರ್ತುಹೋಗ್ತಿತ್ತು ಇಬ್ಬರಿಗೂ.

            ಅವತ್ತು ಆಗಿದ್ದೂ ಹಾಗೇನೇ.

            ಬೆಳಬೆಳಗ್ಗೆಯೇ ರಾಂಗಾಗಿದ್ಳು ಕಮಲೂ. ಹಿಂದಿನ ರಾತ್ರಿಯಿಂದ ಸಣ್ಣಗೆ ಶುರುವಾಗಿದ್ದ ಕೋಲ್ಡ್ ವಾರ್ ಈಗ ರಣಕಹಳೆಯೊಂದಿಗೆ   ಊರ್ಧ್ವಮುಖಿಯಾಗಿತ್ತು. ಅಡುಗೆಯ ಮನೆಯೊಳಗಿಂದ ನಡುಮನೆಯವರೆಗೂ ಪಾತ್ರೆಗಳು ಪಾಕ್ ಗಡಿಯಲ್ಲಿ ಬಾಂಬ್ ಸಿಡಿದಂತೆ ದಬದಬನೆ ನೆಲಕ್ಕೆ ಅಪ್ಪಳಿಸುತ್ತಿದ್ದವು!!

            ಬೆಚ್ಚಿಬಿದ್ದ ಶ್ರೀಕಂಠೂ!!…ಬೆಳಗಿನ ಫ್ರೆಷ್ ಗಾಳಿಯಲ್ಲಿ ಹಾಯಾಗಿ ವಾಕಿಂಗ್ ಹೋಗೋ ಪ್ರಶಾಂತವಾದ ಗಳಿಗೆಯಲ್ಲೇ ಕಮಲೂ ನೋಟಿಸ್ ಕೊಡದೆ ಈ ಬಗೆ ಧಿಡೀರ್ ಕಾಳಗ ಸಾರಬೇಕೇ?!!

            ಬೆಳಬೆಳಗ್ಗೆಯೇ ಅವಳ ಮೂಡ್ ಕೆಡಿಸಿದ್ದರಲ್ಲಿ ತನ್ನ ಕಿರಿಕ್ಕಿನ ಕೈವಾಡ ಇದೆಯೆಂಬ ನಿಜ ಅರಿತ ಶ್ರೀಕಂಠೂ ತನ್ನ ಕೈಲಿದ್ದ ದಿನಪತ್ರಿಕೇನ ಉಂಡೆ ಮಾಡಿ ಮೂಲೆಗೆ ತೂರಿದ….ತನಗೇಕೀ ಹಾಳು ದುರಭ್ಯಾಸ ಅಂಟಿಕೊಂಡು ಬಂದಿದೆಯೋ….ಪೇಪರಿನಲ್ಲಿ ಪ್ರಿಂಟಾಗಿರೋ ಸುದ್ದಿಗಳನ್ನೆಲ್ಲ ಉದ್ದಕ್ಕೆ ಮಂತ್ರದಂತೆ, ಅಡುಗೇಮನೆಯಲ್ಲಿದ್ದ ಅವಳ ಕಿವಿ ಕಚ್ಚುವಂತೆ ಜೋರಾಗಿ ಪಠಿಸುವ ತನ್ನ ಖಯಾಲಿಗಿಷ್ಟು!…ಎಂದು ತನ್ನನ್ನೇ ತಾನು ದೂರ್ವಾಸನಂತೆ ಸ್ವಶಪಿಸಿಕೊಂಡ….ಛೇ, ಮರೆತೇ ಹೋಗಿತ್ತು ಅವನಿಗೆ  ರಾತ್ರಿ ನಡೆದ ರಾದ್ಧಾಂತ!.

            ಪ್ರತಿದಿನ -ಕೆಲಸದ ನಿಂಗಿಯ ತಾಪತ್ರಯಗಳ ವಿಚಾರದಿಂದ ಹಿಡಿದು ದೇಶದ ಸ್ವಚ್ಛತಾ ಮಿಷನ್ ಮೋದಿಯ ನವನವೀನ ಯೋಜನೆಗಳವರೆಗೂ ಚರ್ಚಾಸ್ಪರ್ಧೆಯಲ್ಲಿ ಭಾಗವಹಿಸಿದವರಂತೆ, ಅವರಿಬ್ಬರೂ ಮೇಜು ಗುದ್ದಿ ಬಡಿದಾಡೋವರೆಗೂ ಸೀರಿಯಸ್ ಆಗಿ ಜಗಳದ ರಂಗೇರುತ್ತ, ಕಡೆಗೆ ಅದು ರಕ್ಕಸತಂಗಡಿ ಯುದ್ಧವಾಗಿ ದನಿಗಳು ಮಿಲಾಯಿಸಿದ ಹಾಗೇ ಕೈಗಳೂ ಬಾಕ್ಸಿಂಗ್ ಮಾಡುತ್ತಿದ್ದವು. ಕಡೆಗೆ ಶ್ರೀಕಂಠೂನೇ ‘ಮಾರಾಯ್ತೀ ಇಲ್ಲೇನೋ ಕೊಲೆ ನಡೆದುಹೋಗಿದೆ ಅಂತ ಅಕ್ಕಪಕ್ಕದೊರು ಪೋಲಿಸ್ ಕಂಪ್ಲೇಂಟ್ ಕೊಟ್ಟರೆ ಕಷ್ಟ ಕಣೆ ‘ ಅಂತ ತಾನೇ ಪುಸಕ್ಕನೆ ಮೇಲೆದ್ದು ಮನೆಯ ಕಿಟಕಿ ಬಾಗಿಲುಗಳನ್ನೆಲ್ಲ ದಬದಬ ಮುಚ್ಚಿದರೆ ಕಮ್ಲೂಗೆ ಲೈಸೆನ್ಸ್ ಸಿಕ್ಕ ಹಾಗೆ ಅವಳು ಇನ್ನಷ್ಟು ತನ್ನ ಶ್ರುತಿಪೆಟ್ಟಿಗೆಯನ್ನು ಮುಗಿಲು ಹರಿಯುವಂತೆ ತಾರಕ್ಕಕ್ಕೇರಿಸುವ ಪರಿಪಾಠ ತಪ್ಪಿರಲಿಲ್ಲ. ಬೆಂಕಿ ಹೊತ್ತಿಕೊಂಡ್ರೆ ಅದು ಲಕ್ಷ್ಮೀ ಪಟಾಕಿಯೇ.

 ನಿನ್ನೆ ರಾತ್ರಿಯೂ ಅಗಿದ್ದಷ್ಟೇ…ದರಿದ್ರ ಪೇಪರ್ ಸುದ್ದಿಯಿಂದಲೇ ….ಎಲ್ಲ ಕಡೆಯೂ ದುಬಾರಿ ಸ್ಕೂಲ್ ಡೊನೇಷನ್ ಹಾವಳಿ ಬಗ್ಗೆ ಪೋಷಕರ ಹಾಹಾಕಾರ..ತರಾಟೆ, ದೂರು-ಮುಷ್ಕರ…ಅರ್ಜಿ ಗುಜರಾಯಿಸಲು ಹಿಂದಿನರಾತ್ರಿಯೇ ಶಾಲೆಯ ಗೇಟಿನ ಮುಂದೆ ಠಿಕಾಣಿ…ಬೆಳಗಿನವರೆಗೂ ಕಣ್ಣುಜ್ಜುತ್ಲೇ ಶಿವರಾತ್ರಿ ಜಾಗರಣೆ. ಬೆಳಕು ಹರಿದು, ಬಾಗಿಲು ತೆಗೆಯೋ ಸೆಕ್ಯುರಿಟಿಯ ದರ್ಶನವಾಗುತ್ತಿದ್ದಂತೆ ಧನ್ಯತೆಯ ಪೆಕರು ನಗೆ ಕಿರಿಯುತ್ತಾ,  ಸ್ವರ್ಗದ ಗೇಟು ತೆಗೆದಂತೆ ಕ್ಯೂನಲ್ಲಿ ತೆರೆದ ಆ ಗೇಟಿನೊಳಗೆ ಒಬ್ಬರ ಮೇಲೊಬ್ಬರು , ನುಗ್ಗಿ, ಬಗ್ಗಿ…ಕ್ಯೂನಲ್ಲಿ ಹಾಗೇ ಫ್ರೀಜ್ ಆಗ್ತಾ…

‘ ಛೇ…ಛೇ..’ -ಓದ್ತಾ ಓದ್ತಾ ಶ್ರೀಕಂಠೂ ಉದ್ವೇಗದಿಂದ ಕ್ಯಾಕರಿಸಿ ಉಗುಳುತ್ತ ನಿಷ್ಪಾಪಿ ಪೇಪರನ್ನ ಉಂಡೆ ಮಾಡಿ ಮೂಲೆಗೆ ಎಸೆದಿದ್ದ.

            ಈ ವಿಷ್ಯ ಅಪರಾತ್ರೀವರೆಗೂ ಗಂಡ-ಹೆಂಡಿರ ಚರ್ಚೆಯಲ್ಲಿ ಬೆಂದುಹೋಯ್ತು…ವಿರೋಧ ಪಕ್ಷದವರಂತೆ ದೃಷ್ಟಿ ಯುದ್ಧ ಮಾಡುವ ಸ್ಟೈಲಿನಲ್ಲಿ ಕೆಕ್ಕರಿಸಿ ನೋಡುತ್ತ,  ಹೂಂಕರಿಸಿ, ಮುಖ ತಿರುಗಿಸಿ ಇಬ್ಬರೂ ಬಿದ್ದುಕೊಂಡಿದ್ರು.  

ಆದರೂ ಶ್ರೀಕಂಠೂ ರಾತ್ರಿಯೆಲ್ಲ ಕನವರಿಸ್ತಲೇ ಇದ್ದ.

`ದರಿದ್ರ ವ್ಯವಸ್ಥೆ, ಎಲ್ಲಕ್ಕೂ ಇನ್‍ಫ್ಲುಯೆನ್ಸು, ಡೊನೇಷನ್ನು…ಕಾಂಪಿಟೀಷನ್…ಬಡವರು ಈ ದೇಶದಲ್ಲಿ ಹೇಗೆ ಬದುಕಬೇಕು?…ಏನು ಜೀವನಾನೋ ಏನೋ ಹಾರಿಬಲ್, ಮಿಸರಬಲ್….ಬರೀ ಸಮಸ್ಯೆಗಳ ಬಂಡಲ್…’ – ಎಂದವನು ಹೊದ್ದ ರಗ್ಗು ಬಿಸಾಡಿ ಹಣೆ ಹಣೆ ಬಡಿದುಕೊಂಡ.

            ಸಂಸಾರದ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಗಂಡನ ಪಲಾಯನವಾದದ ಹೇಡಿ ಬುದ್ಧಿಯನ್ನು ಕಂಡು ಕಮಲೂಗೂ ಸಿಕ್ಕಾಪಟ್ಟೆ ರೇಗಿ ಹೋಯ್ತು.

ಘಂಟಾಘೋಷವಾಗಿ ಅವನ ಮಾತುಗಳನ್ನು ಖಂಡಿಸಿದಳು.

ಮರುದಿನದವರೆಗೂ ಕದನ ಮುಂದುವರಿದಿತ್ತು. ಏಕಾಏಕಿ ಗಂಡನ ಅವಳಿಗೆ ಮೇಲೆ ಸಿಟ್ಟು ಸಿಡಿಲಾಗಿತ್ತು.

`ಇಂಥವರಿಗ್ಯಾಕೆ ಬೇಕೋ ಮದುವೇ, ಮಕ್ಳು, ಸಂಸಾರಾ …? ಎಲ್ಲಾ ಬಿಟ್ಟು ಸನ್ಯಾಸಿಯಾಗಿ ಹಿಮಾಲಯಕ್ಕೆ ಹೋಗಬೇಕಿತ್ತಪ್ಪ’ ಎಂದು ಎಗರಾಡಿ, ಸೊರಬುಸ ಮಾಡ್ತಾ, ಖೆಡ್ಡಕ್ಕೆ ಬಿದ್ದ ಆನೆಯಂತೆ ಚಡಪಡಿಸ್ತಾ ಗೋಡೆಗೊತ್ತಿ ಮಲಗಿದಳು-`ನನ್ನ ಮುಟ್ಟಿದರೆ ದೇವರಾಣೆ’ ಅಂತ ಲಕ್ಷ್ಮಣರೇಖೆ ಗೀಚಿ.

            ಶ್ರೀಕಂಠೂ ಮುಖ ಹರಳೆಣ್ಣೆ ಕುಡಿದ ಹಾಗಾಗಿತ್ತು. ರಾತ್ರಿಯೆಲ್ಲ ರಾಮಾಯಣ ಕೇಳಿ, ಮತ್ತೆ ಹೊತ್ತು ಹುಟ್ಟುತ್ತಲೇ ತಾನ್ಯಾಕೆ ಈ ಹಾಳು ಪೇಪರಿನ ಅದೇ ರಂಪ-ರಗಳೆ ತೆಗೆದೆ ಎಂದು ಕೈ ಕೈ ಹಿಸುಕಿಕೊಂಡು ಮಿಡುಕಿದ…. ಛೇ..ಹಾಳಾದ್ದು ಬೆಳಗಿನ ಸ್ಟ್ರಾಂಗ್ ಕಾಫಿಗೆ ಸಂಚಕಾರ ತರಬೇಕೇ?

            ಒಳಗಡೆ ಅರ್ಧಂಬರ್ಧ ಕಾದಿದ್ದ ಹಾಲಿನ ಡಬರೀನ ಕೆಳಗಿಳಿಸಿ ಟಪ್ಪನೆ ಸ್ಟೌವ್ ಆಫ್ ಮಾಡಿದ ಶಬ್ದ ಕೇಳಿ `ಕೆಡ್ತು ಕೆಲಸ’ ಎಂದವನು ಗುನುಗೋ ಅಷ್ಟರಲ್ಲಿ ಬಿರುಗಾಳಿಯಂತೆ ನಡುಮನೆಗೆ ನುಗ್ಗಿ ಬಂದಿದ್ಳು ಕಮಲೂ!!!

            ` ಖಾಸಗಿ ಶಾಲೆಗಳನವರನ್ನೆಲ್ಲ ಕರೆದು ಮೀಟಿಂಗ್ ಮಾಡಿ, ಡೊನೇಶನ್ ಬಗ್ಗೆ ಕ್ರಮ ಕೈಗೊಳ್ಳಲಾಗತ್ತೆ ಹಾಗೇ ಹೀಗೆಂತ ಈ ಪೇಪರಿನವರೇನ್ರೀ ಮನಸ್ಸಿಗೆ ಬಂದದ್ದು ಏನು ಬೇಕಾದ್ರೂ ಬರೆದುಬಿಡ್ತಾರೆ…ಯಾರೋ ಮಿನಿಸ್ತ್ರೋ, ಅಧಿಕಾರಿಗಳೋ ಹೇಳಿದ್ದನ್ನ ನಿಜಾಂತ, ಅದೇ ವೇದವಾಕ್ಯಾಂತ ನಂಬಿ ಏನೇನೋ ಪ್ರಿಂಟೂ  ಮಾಡಿಬಿಡ್ತಾರೆ…ನಿಜಸ್ಥಿತಿ, ಜನಗಳ ಪಾಡು ಅವರಿಗೇನು ಗೊತ್ತು?…ಅದರಲ್ಲಿ ಬರೋದೆಲ್ಲ ಬರೀ ಸುಳ್ಳು ಸುದ್ದಿಗಳು…ಆ ದೇವರೇ ಭೂಮಿಗಿಳಿದು ಬಂದ್ರೂ ಈ ಡೊನೇಷನ್ ಹಾವಳೀನ ತಪ್ಪಿಸಕ್ಕಾಗಲ್ಲ….ಹೂಂ, ಎಲ್ಲಕ್ಕೂ ವೃಥಾ ವ್ಯರ್ಥ ಹೋರಾಟ…ಯಾರು ಬಂದ್ರೂ ನಮ್ಮಪ್ಪನಾಣೆ ಏನೂ ಸುಧಾರಿಸಕ್ಕಾಗಲ್ಲ … ಹತ್ತಾರು ಕಡೆ ತಿರುಗಿರೋಳು, ಹತ್ತಾರು ಜನಗಳನ್ನ ಮಾತಾಡಿಸಿರೋಳು ನಾನು , ಪರಿಸ್ಥಿತಿ ಎಷ್ಟು ಗಬ್ಬೆದ್ದು ಹೋಗಿದೆ ಅಂತ ನನಗ್ಗೊತ್ತು… ನಿಮಗೇನು ಗೊತ್ತು ಪುಸ್ತಕದ ಬದನೇಕಾಯಿ…’-

ಎಂದು ಗಂಡನ ಮೂಗು ಮುರಿದು, `ಅಲ್ಲಿ ಬರೆದಿರೋದನ್ನೇ ನೈವೇದ್ಯ ಅಂತ ನನ್ನ ಮುಂದೆ ಬಂದು ಶಂಖ ಊದಬೇಡಿ ಮತ್ತೆ’ -ಎಂದವಳು ಘಟವಾಣಿಯಾಗಿ ಗದರಿದ ತತ್‍ಕ್ಷಣ ಶ್ರೀಕಂಠೂ ಗಪ್ ಚಿಪ್!!…

ಎರಡೇ ನಿಮಿಷ  ಅವನ ಶ್ರೀಮದ್ ಗಾಂಭೀರ್ಯ…ಮರಳಿ ಅದೇ ತೆವಲು…

            ವಾಕಿಂಗ್‍ನಲ್ಲೂ ಮುಂದುವರಿಸಿದ ಶ್ರೀಕಂಠೂ ತನ್ನ ವಾಗ್ವಾದಾನ ಸೋಲೊಪ್ಪಿಕೊಳ್ಳದೆ…ಅಂತರಂಗದಲ್ಲಿ, ಕಾಫಿಗೆ ಕಲ್ಲು ಬಿದ್ದ ಅಸಮಾಧಾನದ ಹೊಗೆ… ಹೊರಗೆ ಬೆಂಕಿಯ ಕಿಡಿ.

          `ಎಲ್ಲಾ ನಿನಗೇ ತಿಳಿದಿದೆ, ಸರ್ವಜ್ಞನ ತುಂಡು ನೀನು ಅನ್ನೋ ಹಾಗೆ ನಿನ್ನ ಮೂಗಿನ ನೇರಕ್ಕೆ ವಿತಂಡವಾದ ಮಾಡಬೇಡ  ಕಣೆ…ನಿನ್ದು ಬರೀ ನಿರಾಶಾವಾದ…ವೆರಿ ಬ್ಯಾಡ್ ಸೈನ್…’

            ತಾನು ತುಂಬಾ ಪಾಸಿಟಿವ್ ಆಗಿ ಯೋಚಿಸೋನು ಅಂತ, ಇದ್ದಕ್ಕಿದ್ದ ಹಾಗೇ ಪ್ಲೇಟ್ ತಿರುಗಿಸಿಬಿಡುವ ಅವನತ್ತ  ಒಮ್ಮೆ ಕೆಕ್ಕರಿಸಿ ನೋಡಿ ಗುರುಗುಟ್ಟಿದ ಕಮ್ಲೂ. ಅವ್ಳು ತನ್ನ ಮುಖಾನ ಅತ್ತ ತಿರುಗಿಸಿದರೆ, ಅವನ ಮುಖ ವಿರುದ್ದ ದಿಕ್ಕಿಗೆ ತಿರುಗಿತು.

ಗಾಳಿಸೇವನೆಗೆ ಅಂತ ಬಂದ ದಂಪತಿಗಳು,  ಲಾಲ್‍ಬಾಗಿನುದ್ದಕ್ಕೂ ಮುಖ ಉಂಡೆ ಮಾಡ್ಕೊಂಡು ಬಿರುಸಾಗಿ ಹೆಜ್ಜೆ ಎಸೆದರು.

            ಎತ್ತು ಏರಿಗೆ…ಕೋಣ ನೀರಿಗೆ!!!

            ಪ್ರತಿದಿನವೂ ಅವರದು ಇದೇ ಕಥೆ. ವಾಕಿಂಗ್ ಹೊರಡುವಾಗ ಅವರ ನಿರ್ಧಾರಾನೇ ಬೇರೆ…ಹಾಯಾಗಿ ವಾಕಿಂಗ್ ಮಾಡ್ತಾ, ತಾಜಾ ಗಾಳಿ ಸೇವಿಸ್ತಾ… ಟ್ರಿಮ್ಮು,ಸ್ಲಿಮ್ಮು…ಹೆಲ್ತಿ ಆಗಬೇಕು ಎಂಬ ಗುರಿ-ಹುಮ್ಮಸ್ಸು ಪಂಪು ಹೊಡ್ಕೊಂಡು, ಹೊಸಿಲು ದಾಟ್ತಿದ್ದ ಹಾಗೇ ಇಬ್ಬರಿಗೂ ಅವರ ಅಜೆಂಡಾ  ಮರ್ತೇಹೋಗ್ತಿತ್ತು. ಎರಡು ಹೆಜ್ಜೆ ನಡಿಯೋದ್ರಲ್ಲೇ, ಯಾವು ಯಾವುದೋ ದರಬೇಸಿ ವಿಷಯಗಳು ಅವರ ದವಡೆಗೆ ಸಿಕ್ಕು , ಚಕ್ಕುಲಿ-ಮುರುಕಿನ ಥರ ಕುರುಂ ಕುರುಂ ಅಗೆದಗೆದು ಹಲ್ಲುಗಳು ಗರಗಸದಂತಾಗುತ್ತಿದ್ದವು….ಕಡೆಗೆ ಪರಸ್ಪರ ದೋಷಾರೋಪಣದ ಮಾತಿನ ಮಸೆತದಲ್ಲಿ ವಿಷಯಗಳನ್ನು ಉಜ್ಜುಜ್ಜಿ ಹಾಕಲಾರಂಭಿಸುತ್ತಿದ್ದರು.

ಇದೇ ವಾಗ್ಯದ್ಧದಲ್ಲಿ ವಾಕಿಂಗ್ ಅನ್ನೋ ಕರ್ಮ ಮುಗಿಸಿ, ಸಾಕಪ್ಪ ಸಾಕು ಸಹವಾಸ ಅನ್ನೋ ಕೆಟ್ಟಮೋರೆಯಲ್ಲಿ ಮನೆ ಕಡೆ ಮುಖ ಮಾಡಿದಾಗ, ಅವರಿಬ್ಬರ ಮುಖಗಳು ಉತ್ತರ ದಕ್ಷಿಣವಾಗಿ ಜನ್ಮಾಂತರದ ದ್ವೇಷಿಗಳು ಅಂಬೋ ಹಾಗೆ ಸಿಟ್ಟು ಮಸೆಯುತ್ತಿದ್ದವು. ಅದೇ ಕೋಪ, ಗುರುಗುಟ್ಟುವಿಕೆ, ಅಸಮಾಧಾನವನ್ನು ಮನೆವರ್ಗೂ ಲಾಲಿ ಹಾಡ್ತಾ ಪೋಷಿಸಿಕೊಂಡು ಬರುತ್ತಿದ್ರು.

            ದೇಶದ ಸಮಸ್ಯೆಗಳನ್ನೆಲ್ಲ ತಮ್ಮದೇ ಅನ್ನೋ ಹಾಗೆ ಬಾಚ್ಕೊಂಡು ಸೀರಿಯಸ್ಸಾಗಿ ಅದರ ಪರ-ವಿರುದ್ಧ ಸೆಣೆಸಾಡ್ತಾ, ತಮ್ಮ ವೈಯಕ್ತಿಕ ಖುಷಿ-ಕ್ಷಣಗಳೆಲ್ಲ  ಬೊಗಸೆಯೊಳಗಿನ ನೀರಿನ ಹಾಗೆ ಸೋರಿಹೋಗ್ತಿರೋದನ್ನೂ ಗಮನಿಸದಂಥ ಅಪ್ಪಟ ದೇಶಪ್ರೇಮಿಗಳು. ಸಮಾಜವಾದದ ಸಿದ್ಧಾಂತಗಳನ್ನು ಕಡೆಗೋಲಿಟ್ಟು ಒಬ್ರು ಒಪ್ಪಿಕೊಂಡ್ರೆ, ಇನ್ನೊಬ್ರು ನಿರಾಕರಿಸ್ತಾ, ಟಿವಿಯ ಚರ್ಚಾವೇದಿಕೆಯಲ್ಲಿ ಕುಳಿತ ದುಷ್ಮನ್‍ಗಳ ಆವೇಶ ಪ್ರದರ್ಶಿಸೋ ಅಪರೂಪದ ಆದರ್ಶ ಜೋಡಿ ಇದು!!

            ಇಂದೂ ಆಗಿದ್ದು ಕೂಡ ಅದೇ.

            ಗಂಟಲಿಗೆ ಕಾಫೀ ಬೀಳದ ಗಡಸುಕಂಠದಲ್ಲಿ ಶ್ರೀಕಂಠೂ ವಾದಿಸಿದ್ದೇ ವಾದಿಸಿದ್ದು…

ಇಬ್ಬರಿಗೂ ಕಂಠಭರ್ತಿ `ಈಗೋ’…!!

            ಯಾರ ಮಾತನ್ನು ಯಾರೂ ಕೇಳದ ಪರಿಸ್ಥಿತಿ… ಮನಸ್ಥಿತಿ.  ಆದರೂ ಕೆಟ್ಟುಹೋದ ರೆಕಾರ್ಡುಗಳ ಹಾಗೆ ಕೆಟ್ಟಸ್ವರದಲ್ಲಿ ಅರಚಿದ್ದನ್ನೇ ಅರಚೋ ಕಿಸಬಾಯಿದಾಸನ ಅಪರಾವತಾರವಾಗಿದ್ದರು!!..

            `ನಿಮ್ಮ ಗಂಡಸರ ಬುದ್ಧಿ ಎಲ್ಲಿ ಬಿಡ್ತೀರಾ…ಎಲ್ಲದರಲ್ಲೂ ನಿಮ್ಮ ಹಟಾನೇ ಗೆಲ್ಲಬೇಕಲ್ಲಾ??!…ಹೂಂ ನಾವು ಆಟಕ್ಕುಂಟು, ಲೆಕ್ಕಕ್ಕಿಲ್ಲ’

            -ಮಿಂಚು ಗುಡುಗು ಮುಗಿದುಹೋಗಿತ್ತು!…ಇನ್ನೇನು ತುಂತುರುಮಳೆ…ಅನಂತರ ಧಾರಾಕಾರ ಮಳೆ!!..

            ಅಷ್ಟರಲ್ಲಿ ಶ್ರೀಕಂಠೂ ಎಚ್ಚೆತ್ತುಕೊಂಡುಬಿಟ್ಟ ಕಿಲಾಡಿ!.

            `ಆಯ್ತು ಬಿಡೆ…ನಿನ್ನ ಇಷ್ಟದಂತೆಯೇ ಕಾನ್ವೆಂಟಿಗೇ ಸೇರಿಸೋಣ…ಆದರೂ ಕನ್ನಡಿಗರಾದ ನಾವು ಮಾತೃಭಾಷೆಗೆ ಆದ್ಯತೆ ಕೊಡಬೇಕೂ ಅನ್ನೋ ಅಭಿಮಾನದಿಂದ ನಾನು, ಕನ್ನಡಶಾಲೆಗೆ ಸೇರಿಸೋಣ ಅಂದಿದ್ದೇ ದೊಡ್ಡ ತಪ್ಪಾಯ್ತಲ್ಲ…ಸರಿಕಣೆ ಮಾರಾಯ್ತೀ, ಜೀ ಹುಕುಂ…ನೀನು ಆರ್ಡರ್ ಕೊಟ್ಮೇಲೆ ಮುಗೀತು..ಓಕೆ…ಸ್ವಲ್ಪ ಮೆಲ್ಲಗೆ ಮಾತಾಡೇ, ಅಕ್ಕಪಕ್ಕದಲ್ಲೇ ಯಾವುದಾದ್ರೂ ಶಾಲೆ ಹುಡುಕಿದರಾಯ್ತು’

– ಅವನ ಭರವಸೆ ನುಡಿ ಹೊರಜಾರಿದೊಡನೆ ಕಮ್ಲೂ ಮುಖದಲ್ಲಿ ಅರ್ಧಭಾರ ಇಳಿದ ನಿರಾಳ ಭಾವ!

            `ಅಂತೂ ನಿನ್ನ ಡಿಮ್ಯಾಂಡ್ ಲಿಸ್ಟು ಇನ್ನೂ ಉದ್ದಕ್ಕೆ ಇದೆ ಅನ್ನು…ಸಾಕಪ್ಪ ಸಾಕು, ಇದನ್ನ ಪೂರೈಸಕ್ಕೆ ನಾನು ಇನ್ನೊಂದು ಆರ್.ಡಿ. ಶುರು ಮಾಡಬೇಕಷ್ಟೇ, ಹಾಗೇನೆ ಪಿ.ಎಫ್. ಅಮೌಂಟನ್ನೂ ಇನ್ನೂ ಸ್ವಲ್ಪ ಜಾಸ್ತಿ ಮಾಡಬೇಕಾಗತ್ತೆ. ಅಗತ್ಯ ಬಿದ್ದರೆ ಲೋನೂ ತೊಗೋಬೇಕಾಗಬಹ್ದು…ಓಕೆ ಕಣೆ..ಈಗ ನಿರಾಳ ತಾನೇ? ನಿನ್ನ ಡಿಮ್ಯಾಂಡ್ ಸ್ಯಾನ್ಕ್ಷಂಡ್ ‘

            -ಗಂಡನ ಓರೆನೋಟದಲ್ಲಿ ವ್ಯಂಗ್ಯದ ಸಿಬುರನ್ನು ಹುಡುಕ್ತಾ  ಕಮ್ಲೂ-

 `ಆಹಾಹಾ…ಸಮಸ್ಯೆ ಎಲ್ಲ ನನ್ನೊಬ್ಬಳದೇ ಅನ್ನೋಹಾಗೆ ಎಷ್ಟು ಸಲೀಸಾಗಿ ಸುವ್ವಿರಾಗ ಹಾಡ್ತೀರಾ, ನಿಮಗೇನು ಇದು ಸಂಬಂಧಿಸಿದ್ದೇ ಅಲ್ವಾ ಹಾಗಾದ್ರೆ?!…ಹೂಂ…ಈ ಹಾಳು ಗಂಡಸರೇ ಹೀಗೆ, ಜವಾಬ್ದಾರಿಗಳನ್ನೆಲ್ಲ ಹೆಂಡ್ತೀರ ತಲೇ ಮೇಲೆ ಜಾರಿಸಿ, ಸದಾ ಟಿ.ವಿ. ಮುಂದೆ ಗಂ ಮೆತ್ತಿ ಹಾಕ್ಕೊಂಡು ಹಾಯಾಗಿ ವಿಗ್ರಹದ ಹಾಗೇ ಪ್ರತಿಷ್ಠಾಪನೆ ಆಗ್ಬಿಟ್ಟಿರ್ತೀರಾ…ಮಹಾ ಕಿಲಾಡಿಗಳೂರೀ ನೀವುಗಳು…ನಾವೂ ಎಲ್ಲೀತನಕ ಈ ಶೋಷಣೇನಾ ಸಹಿಸ್ಕೊಳಕ್ಕಾಗತ್ತೆ…ನೋ..ನೋ…ಬೇಡವೇ ಬೇಡ, ನೀವು ಯಾವ ಕಾನ್ವೆಂಟಿಗಾದ್ರೂ ಸೇರಿಸ್ಕೊಳ್ಳಿ, ಅಥ್ವಾ ಸರಕಾರೀ ಶಾಲೇಗೇ ತಳ್ಳಿ, ನಮ್ಮಪ್ಪನಾಣೆ ನಾನಿನ್ನು ಈ ವಿಷ್ಯದಲ್ಲಿ ತಲೆ ಹಾಕಿದರೆ ಕೇಳಿ…ಇದು ನನ್ನ ಕಡೇ ನಿರ್ಧಾರ, ಮೈಂಡ್ ಇಟ್!!’

            -ಎಂದು ಭದ್ರಕಾಳಿಯಾಗಿ ಕಾಲನ್ನು ನೆಲಕ್ಕಪ್ಪಳಿಸಿದಳು.  ನೆಲದ ಮಣ್ಣು ಅವಳುದ್ದ ಮೇಲೆದ್ದಿತು.

ಹೀಗೆ ಅವರ ಜಗಳ ಸುಮಾರು ವಾಕಿಂಗ್‍ನ ಮುಕ್ಕಾಲು ದಾರಿಯನ್ನು ಕಬಳಿಸಿತ್ತು. ಕೈ ಕೈ ಮಿಲಾಯಿಸೋದೊಂದು ಬಾಕಿ. ಅಷ್ಟರಲ್ಲಿ, ಅದುವರೆಗೂ ಅವರ ಹಿಂದೆಯೇ ನೆರಳಿನಂತೆ ಅವರನ್ನು ಹಿಂಬಾಲಿಸಿಕೊಂಡು ಬರುತ್ತ ಅವರ ಜಂಟೀ ವರಸೆಗೆ ಕಿವಿಯಾಗಿ,  ಕುತೂಹಲದ ಮೂಟೆಯಾಗಿದ್ದ ವೃದ್ಧರೊಬ್ಬರು ಇನ್ನು ತಡೆದುಕೊಳ್ಳಲಾರದೆ ಅವರ ಮಧ್ಯೆ ಧೂಮಕೇತುವಿನಂತೆ ಪ್ರವೇಶಿಸಿಯೇ ಬಿಟ್ಟರು!!

  `ತಪ್ಪು ತಿಳ್ಕೊಳಲ್ಲ ಅಂದ್ರೆ ಒಂದ್ಮಾತು, ವಯಸ್ಸಿನಲ್ಲಿ ಹಿರಿಯ, ಅಧಿಕಪ್ರಸಂಗವಾಗದಿದ್ರೆ ನಾನು ನಿಮ್ಮ ಪ್ರಾಬ್ಲಂ ಅನ್ನು ಸಾಲ್ವ್ ಮಾಡ್ಲಾ?’

             ಅನಾಮತ್ತಾಗಿ ಪ್ರತ್ಯಕ್ಷವಾದ ಜಡ್ಜ್ ಅನ್ನು ಕಂಡು ಗಂಡ-ಹೆಂಡತಿ ಇಬ್ಬರೂ ಪೆಚ್ಚಾದರು!

ಶ್ರೀಕಂಠೂ ಆ ಕಿವಿಯಿಂದ ಈ ಕಿವಿಯವರೆಗೂ ಪೆಂಗನಂತೆ ಹಲ್ಲು ಕಿರಿದ.

            ` ನಂಗೆಲ್ಲ ಅರ್ಥವಾಗತ್ತೆ, ಬೇಡ, ನೀವು ಹೇಳೋದೇನೂ ಬೇಡ…ದಾರಿಯುದ್ದಕ್ಕೂ ನಿಮ್ಮ ಮಾತೆಲ್ಲ ಕಿವಿಗೆ ಬೀಳ್ತಾ ಇತ್ತು…ಹಿ ಹ್ಹೀ…ಮಗೂನ ಯಾವ ಕಾನ್ವೆಂಟಿಗೆ ಸೇರಿಸೋದು ಅನ್ನೋದರ ಬಗ್ಗೆ ನೀವು ಕಚ್ಚಾಡ್ತಿದ್ದೀರಾ ಗೊತ್ತಾಯ್ತು..ನನ್ನ ಮಾತು ಕೇಳಿ..ಬನ್ನಿ..ಇಬ್ಬರೂ ಸ್ವಲ್ಪ ಹೊತ್ತು ಈ ಬೆಂಚಿನ ಮೇಲೆ ಸಮಾಧಾನವಾಗಿ ಕೂತ್ಕೊಳ್ಳಿ, ನಿಧಾನವಾಗಿ ಚರ್ಚೆ ಮಾಡಿ ಒಂದು ತೀರ್ಮಾನಕ್ಕೆ ಬನ್ನಿ…ಹೀಗೆಲ್ಲ ಜಗಳ ಆಡಬಾರದು..ತಂದೆ ತಾಯಿ ಅನ್ನಿಸ್ಕೊಂಡ್ಮೇಲೆ ಇಬ್ಬರೂ ಸಮಾನ ಜವಾಬ್ದಾರಿ ಹೊರಬೇಕು, ಇಬ್ಬರ ಅಭಿಪ್ರಾಯಗಳೂ ಮುಖ್ಯಾನಪ್ಪಾ…ಬನ್ನಿ, ಇಲ್ಲಿ ಕೂಡಿ, ಬನ್ನಿ ತಾಯಿ ‘

            ಕಿತ್ತಾಡ್ತಿದ್ದವರಿಬ್ರೂ ಗಪ್‍ಚಿಪ್ಪಾಗಿ ತೆಪ್ಪನೆ ಕೂತರು.

            `ಹ್ಞಾ…ಈಗ್ಹೇಳಿ…ನಿಮಗೆ ಮಗನೋ ಮಗಳೋ..ಎಷ್ಟು ವರ್ಷ?’

            ಇಂಗು ತಿಂದ ಮಂಗನಂತಾದ ಕಮ್ಲೂ-ಶ್ರೀಕಂಠೂ ಇಬ್ರೂ ಮುಖ ಮುಖ ನೋಡಿಕೊಂಡು ಕಕ್ಕಾಬಿಕ್ಕಿಯಾದರು!…

            `ಇರಲಿ, ಇಲ್ಲಿ ಹೆಣ್ಣು-ಗಂಡು ಮುಖ್ಯ ಅಲ್ವೇ ಅಲ್ಲ, ಡೋಂಟ್ ವರಿ…ಮಕ್ಕಳ ಭವಿಷ್ಯ  ಖಂಡಿತಾ ಮುಖ್ಯ ಕಣ್ರಪ್ಪ…ಇಬ್ಬರೂ ಶಾಂತಚಿತ್ತರಾಗಿ ಆಲೋಚನೆ ಮಾಡಿ…ನಿಮ್ಮಿಬ್ಬರ ಜಗಳದಲ್ಲಿ ಪಾಪಾ ಕೂಸು ಬಡವಾಗಬಾರದಲ್ವೇ?’- ಅನುಭವಸ್ಥ ಮುದುಕರು ಕಾಳಜಿಯಿಂದ ನುಡಿದರು.

            `ಹಾಂ…ಕೂಸು?!’ – ಜೋಡಿದನಿ ಒಟ್ಟಿಗೆ ಚಿಮ್ಮಿತು ಅಚ್ಚರಿಯಿಂದ.

            `ನೀವು ಜಗಳ ಕಾಯಕ್ಕೆ ಅಡ್ಡೀಂತ ಮಗೂನ ಮನೇಲೇ ಬಿಟ್ಟು ಬಂದಿದ್ದೀರಲ್ವೇ ಅಜ್ಜೀ ತಾತನ ಹತ್ರ?’- ಎಂದರಾತ ಲೇವಡಿಯಿಂದ ಕಿಸಕ್ಕನೆ ನಕ್ಕು.

            `ಮ…ಮ..ಮಗೂ!!..’ ಶ್ರೀಕಂಠ ತಲೆ ತುರಿಸಿಕೊಂಡ ಬೆಪ್ಪಾಗಿ.

            `ಮಗೂ?!!’ ಕಮ್ಲೂ ಬೆಚ್ಚಿಬಿದ್ದಳು!!

            ` ಮಗೂ..?! ಇಲ್ಲಾ ಇಲ್ಲಾ… ನಾವಿನ್ನೂ….ಮಕ್ಕಳ ಬಗ್ಗೆ ಪ್ಲಾನ್ ಮಾಡಿಲ್ಲ ಸಾರ್…ಕಾನ್ವೆಂಟ್ ಸೀಟು, ಡೊನೇಷನ್ನು ಇತ್ಯಾದಿಗಳೆಲ್ಲಾ ಕನ್‍ಫರಂ ಆದ್ಮೇಲೆ ಮಗೂ ಬಗ್ಗೆ ಪ್ಲಾನ್ ಮಾಡ್ಕೊಳ್ಳೋಣಾಂತ….’

– ಶ್ರೀಕಂಠೂ ದನಿ ಕಟ್ಟಿತು ನಾಚಿಕೆ-ಸಂಕೋಚಗಳಿಂದ ಹಿಡಿಯಾಗಿ.

 ತಟ್ಟನೆ- ಪಿಚಕಾರಿಯಂತೆ ಪಕಪಕನೆ ನಗು ತೂರಿದ ಆ ಮುದುಕಪ್ಪನ ಬೊಚ್ಚಬಾಯ ಕೆನೆತದ ನಗು ಆಕಾಶಕ್ಕೆ ನೆಗೆಯಿತು.

`ಚೆನ್ನಾಗಿದೆ, ತುಂಬ ಚೆನ್ನಾಗಿದೆ…ಕೂಸು ಹುಟ್ಟೋಕ್ಮುಂಚೆ ಕುಲಾವೀನೇ ಅಂತ ಗಾದೆ ಕೇಳಿದ್ನಪ್ಪ…ಹಹ್ಹಹ್ಹಾ…ಈಗ ಕೂಸಿಗೆ ಮುಂಚೇನೆ ಸ್ಕೂಲು ಬೇಟೇನೇ ?!!…ಹೊಸ ಗಾದೆ…ಅನ್ವರ್ಥಕವಾಗಿದೆ ಬಿಡಿ ಈ ಕಾಲಕ್ಕೆ’-ಅಂತ ಆತ ಅಂದ್ಬಿಡೋದೇ?!!!

            ಕಮ್ಲೂ-ಶ್ರೀಕಂಠೂ ಇಬ್ಬರೂ ಜಗಳ ಮರೆತು ನಗತೊಡಗಿದರು.

                                    **************************************

                                                                                                              _ ವೈ.ಕೆ.ಸಂಧ್ಯಾಶರ್ಮ

Related posts

ಅಂತರ

YK Sandhya Sharma

ಪ್ರಾಮಾಣಿಕತೆ

YK Sandhya Sharma

ಹೀಗೊಂದು ಸ್ವಗತ

YK Sandhya Sharma

Leave a Comment

This site uses Akismet to reduce spam. Learn how your comment data is processed.