Image default
Dancer Profile

ಭರತನಾಟ್ಯ ಕಲಾಸಾಧಕಿ ವಿದ್ಯಾ ರವಿಶಂಕರ್

ಕೆಲವೊಮ್ಮೆ ಗುರುಗಳ ಹೆಸರಿನ ಬಲದ ಮೇಲೆ ಶಿಷ್ಯರ ಯೋಗ್ಯತೆ-ಪ್ರತಿಭೆಯನ್ನು ಅಳೆಯುವ ಪರಿಪಾಠವಿದೆ. ಅದರಂತೆ ಮೈಸೂರು ಶೈಲಿಯ ಭರತನಾಟ್ಯ ಅಭ್ಯಾಸ ಮಾಡಿರುವ ವಿದುಷಿ. ವಿದ್ಯಾ ರವಿಶಂಕರ್ ತುಂಬ ಅದೃಷ್ಟವಂತೆ. ಕರ್ನಾಟಕದ ಹಿರಿಯ ಗುರು, ಮೈಸೂರು ಆಸ್ಥಾನ ವಿದುಷಿ ಪದ್ಮಭೂಷಣ ಡಾ. ವೆಂಕಟಲಕ್ಷಮ್ಮ ಅವರ ನೇರ ಹಾಗೂ ಕಡೆಯ ಶಿಷ್ಯಳಾಗಿ ಸುಮಾರು ಒಂಭತ್ತುವರ್ಷಗಳ ಕಾಲ ಹಿಂದಿನ ಗುರುಕುಲದಂತೆ ಅವರ ಸೇವೆ ಮಾಡಿಕೊಂಡು ವಿದ್ಯಾರ್ಜಿಸಿ, ಹಿರಿಯ ನೃತ್ಯಕಲಾವಿದೆ ಮತ್ತು ನುರಿತ ನಾಟ್ಯಗುರುವೆನಿಸಿಕೊಂಡಿರುವುದು ವಿದ್ಯಾರ ಅಗ್ಗಳಿಕೆ.  

ಮೂಲತಃ ಶ್ರೀರಂಗಪಟ್ಟಣದವರು. ತಾತ ಬಸರಾಳು ಶ್ರೀಕಂಠಯ್ಯ ಸಾಹಿತಿ. ತಂದೆ ಕೃಷಿಕ ಶ್ರೇಷ್ಠ ಪ್ರಶಸ್ತಿ  ಪಡೆದ  ಬಿ.ಎಸ್. ಅನಂತರಾಮಯ್ಯ ಮತ್ತು ತಾಯಿ ಕಮಲಮ್ಮ ಬಾಲ್ಯದಿಂದಲೂ ಮಗಳ ಮನದಲ್ಲಿ ಕಲೆಯ ಬಗ್ಗೆ ಆಸಕ್ತಿ ಬಿತ್ತಿದವರು. ಚಿಕ್ಕವಯಸ್ಸಿನಲ್ಲಿ ವಿದ್ಯಾ, ವೀಣೆ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತ ಎರಡೂ ಕಲಿತರು. ಶಾಲಾ-ಕಾಲೇಜುಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಗೆಲ್ಲುತ್ತ ಬಂದವಳಿಗೆ ಗೆಳತಿಯರೊಡನೆ ನೃತ್ಯ ಮಾಡುವುದೂ ಅಭ್ಯಾಸವಾಗಿ ಹೋಗಿತ್ತು. ಸುಪ್ತವಾಗಿದ್ದ ನೃತ್ಯದೊಲವು, ಪಿ.ಯೂ.ಸಿ ಓದಲು  ಮೈಸೂರಿಗೆ ಬಂದನಂತರ ಆಕಾಂಕ್ಷೆಯಾಗಿ ಬೆಳೆದು, ಸುಮಾರು ಹದಿನಾರರ ವಯಸ್ಸಿನಲ್ಲಿ ವಿದುಷಿ ಮೀನಾಕ್ಷಿ ಹಾಗೂ ನಾಟ್ಯಾಚಾರ್ಯ ವಿಷ್ಣುದಾಸ ಅವರಲ್ಲಿ ಪ್ರಾರಂಭಿಕ ನೃತ್ಯಾಭ್ಯಾಸವಾಯಿತು.

ಕರ್ನಾಟಕ ಸರ್ಕಾರದ ಜ್ಯೂನಿಯರ್ ನೃತ್ಯಪರೀಕ್ಷೆಯ ನಂತರ ವಿದ್ಯಾ, ಡಾ. ವೆಂಕಟಲಕ್ಷಮ್ಮನವರ ಸಮರ್ಥ ಗರಡಿಯಡಿ ಬಂದು ಶುದ್ಧ ‘ಮೈಸೂರು ಶೈಲಿ’ ಯ ಸೊಗಡಿನ ಭರತನಾಟ್ಯ ತರಬೇತಿ ಪಡೆದರು. ಸುಮಾರು ಒಂಭತ್ತು ವರ್ಷಗಳು ಸತತ ಪರಿಶ್ರಮದ ವಿದ್ಯಾರ್ಜನೆ, ಅನಂತರ ವೆಂಕಟಲಕ್ಷಮ್ಮನವರ ಮೊಮ್ಮಗಳು ಪ್ರೊ. ಶಕುಂತಲಾ ಅವರಲ್ಲಿ ಕಲಿಕೆ ಮುಂದುವರಿಕೆ. ಕರ್ನಾಟಕ ಸರ್ಕಾರದ ‘ವಿದ್ವತ್’ ನೃತ್ಯಪರೀಕ್ಷೆಯಲ್ಲಿ ಅತ್ಯುಚ್ಚ ಅಂಕಗಳಿಂದ ಜಯಶೀಲರಾಗಿ ಅಂಗಶುದ್ಧಿಯ ನರ್ತನ, ಅಭಿನಯ ಪರಿಣತಿಯ ಅನೇಕ ಏಕವ್ಯಕ್ತಿ ನೃತ್ಯಪ್ರದರ್ಶನಗಳಿಂದ ಗಮನಾರ್ಹರಾದರು.  

ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ಗುರುಗಳ ಸಾನಿಧ್ಯದಲ್ಲಿ ವಿದ್ಯಾರ ‘ರಂಗಪ್ರವೇಶ’ ನಡೆದುದೊಂದು ವಿಶೇಷ. ಹೀಗೆ ಕಳೆದ ಮೂವತ್ತು ವರ್ಷಗಳಿಂದ ನಾಟ್ಯರಂಗದಲ್ಲಿ ಹೆಸರಾಂತ ಗುರುವಾಗಿ, ನೃತ್ಯ ಕಲಾವಿದೆ-ಸಂಯೋಜಕಿಯಾಗಿ ಮೈಸೂರುಶೈಲಿಯ ಭರತನಾಟ್ಯವನ್ನು ಉಳಿಸಿ, ಬೆಳೆಸಿಕೊಂಡು ಬರುತ್ತಿರುವ ಹೆಮ್ಮೆ ಇವರಿಗಿದೆ. ದೀರ್ಘಾನುಭವ ಸಹಜವಾಗಿ ನೃತ್ಯಪರಿಪಾಕದಲ್ಲಿ ಪಕ್ವತೆ, ಪ್ರೌಢಿಮೆಗಳ ಸಾಧಕತೆಗೆ ಪೂರಕವಾಗಿದೆ. ವೆಂಕಟಲಕ್ಷಮ್ಮನವರ ಗುರುಗಳಾಗಿದ್ದ ‘ಜಟ್ಟಿ ತಾಯಮ್ಮ’ನವರ ಸ್ಮರಣಾರ್ಥವಾಗಿ ಶ್ರ್ರೀರಂಗಪಟ್ಟಣದಲ್ಲಿ ಇಪ್ಪತ್ತೈದು ವರುಷಗಳ ಹಿಂದೆಯೇ ‘ಶ್ರೀ ಮಾತೃಕಾ ನೃತ್ಯಶಾಲೆ’ ಸ್ಥಾಪಿಸಿ ನೂರಾರು ಮಕ್ಕಳಿಗೆ ನಾಟ್ಯಶಿಕ್ಷಣ ನೀಡುತ್ತಿದ್ದು, ಬೆಂಗಳೂರಿನಲ್ಲೂ ಶಾಲೆ ನಡೆಸುತ್ತಿದ್ದಾರೆ ವಿದ್ಯಾ.

ದೇಶಾದ್ಯಂತ ತಮ್ಮ ಶಿಷ್ಯತಂಡದೊಂದಿಗೆ ಅನೇಕ ನೃತ್ಯಪ್ರದರ್ಶನಗಳನ್ನು ನೀಡಿ , ದಸರಾ, ಹೊಯ್ಸಳ ಸಾಮ್ರಾಜ್ಯೋತ್ಸವ, ಕದಂಬೋತ್ಸವ, ಹಂಪಿ, ಮಹಾ ಮಸ್ತಕಾಭಿಷೇಕ, ಪಂಚಲಿಂಗದರ್ಶನ, ಅದಮ್ಯ ಚೇತನ ಮುಂತಾದ ಅನೇಕ ಪ್ರತಿಷ್ಠಿತ ನೃತ್ಯೋತ್ಸವಗಳಲ್ಲಿ ಪಾಲ್ಗೊಂಡ ಹೆಮ್ಮೆ ಅವರದು. ಜೊತೆಗೆ ಶ್ರೀ ರಮಣ ಮಹರ್ಷಿ ಅಕಾಡೆಮಿ ಆಫ್ ಬ್ಲೈಂಡ್ ಸಂಸ್ಥೆಯ ಅಂಧಮಕ್ಕಳಿಗೆ ನಾಟ್ಯಶಿಕ್ಷಣ ನೀಡಿ, ಕೂಚಿಪುಡಿ ನೃತ್ಯದ ‘ತರಂಗಂ ’ ಅನ್ನು ‘ಗಿನ್ನಿಸ್ ವರ್ಲ್ಡ್ ರೆಕಾರ್ಡ್’ ಮಾಡಿರುವುದು ಅಗ್ಗಳಿಕೆಯೇ ಸರಿ.

ಸದಾ ಹೊಸಪ್ರಯೋಗ-ಪರಿಕಲ್ಪನೆಗಳಿಗಾಗಿ ತುಡಿಯವ ವಿದ್ಯಾ ಅವರ ಪ್ರಸಿದ್ಧ ನೃತ್ಯರೂಪಕಗಳೆಂದರೆ, ಕನ್ನಡ ಕವಿಗಳು ಕಂಡ ಗೋಮಟೇಶ್ವರ, ಪಂಪನ ಪೆಂಪು, ಸೀತಾ ಪರಿಣಯಂ, ದಶಾವತಾರ, ಭಸ್ಮಮೋಹಿನಿ, ಸಮನ್ವಯ,(ಭರತನಾಟ್ಯ ಮತ್ತು ಕಲರಿಪಯಟು ಸಮರಕಲೆಯ ಸಂಯೋಜನೆ) ಕನ್ನಡನುಡಿ ಗೆಜ್ಜೆ ಮುಂತಾದವುಗಳಲ್ಲದೆ, ದೂರದರ್ಶನದಲ್ಲಿ ಅನೇಕ ನೃತ್ಯರೂಪಕಗಳನ್ನು ಪ್ರದರ್ಶಿಸಿದ ಖ್ಯಾತಿ. ಜೊತೆಗೆ ಅನೇಕ ಸಂವಾದ ಮತ್ತು ಚರ್ಚೆಗಳಲ್ಲಿ ಭಾಗವಹಿಸಿದ, ನೃತ್ಯ ಪರೀಕ್ಷೆಗಳಿಗೆ ಪರೀಕ್ಷಕರಾಗಿ, ಸ್ಪರ್ಧೆಗಳಿಗೆ ತೀರ್ಪುಗಾರರಾದ  ವಿಪುಲಾನುಭವ. ಅನೇಕ ನೃತ್ಯಸಂಸ್ಥೆಗಳಿಗೆ ಟ್ರಸ್ಟಿಯಾಗಿ ಸೇವೆ ಸಲ್ಲಿಸುತ್ತಿರುವ ವಿದ್ಯಾ ಅವರ ಪ್ರತಿಭೆಯನ್ನು ಗುರುತಿಸಿ ಅನೇಕ  ಪ್ರತಿಷ್ಟಿತ ಪ್ರಶಸ್ತಿಗಳು ಅವರನ್ನು ಹಿಂಬಾಲಿಸಿವೆ. ಮಂಡ್ಯ ಜಿಲ್ಲಾಡಳಿತದ  ರಾಜ್ಯೋತ್ಸವ ಪ್ರಶಸ್ತಿ, ಬೆಂಗಳೂರು ಮಹಾನಗರ ಪಾಲಿಕೆಯ  ‘’ಕೆಂಪೇಗೌಡ’’ ಪ್ರಶಸ್ತಿ, ಮಹಿಳಾ ಮತ್ತು ಮಕ್ಕಳ ಇಲಾಖೆಯ ‘’ಕಿತ್ತೂರು ಚೆನ್ನಮ್ಮ’’ ಪ್ರಶಸ್ತಿ, ಆರ್ಯಭಟ ಅಂತರರಾಷ್ಟ್ರೀಯ ಸಾಂಸ್ಕೃತಿಕ ಪ್ರಶಸ್ತಿಗಳು ಲಭಿಸಿವೆ. ಇವರೆಲ್ಲ ನೃತ್ಯ ಚಟುವಟಿಕೆಗಳಿಗೆ ತುಂಬು ಪ್ರೋತ್ಸಾಹ ನೀಡುತ್ತಿರುವವರು ಪತಿ ರವಿಶಂಕರ್ ಅಭಿನಂದನೀಯರು.

Related posts

ಆಕರ್ಷಕ ನೃತ್ಯ ಸಂಯೋಜಕಿ- ಕಲಾವಿದೆ ರಶ್ಮಿ ವಿಜಯ್

YK Sandhya Sharma

ಮೋಹಕ ಒಡಿಸ್ಸಿ ನೃತ್ಯಗಾರ್ತಿ ಮಧುಲಿತಾ ಮಹೋಪಾತ್ರ

YK Sandhya Sharma

ನಾಟ್ಯ- ಯೋಗ ಕಲಾಸಾಧಕಿ ಜ್ಯೋತಿ ಪಟ್ಟಾಭಿರಾಮ್

YK Sandhya Sharma

Leave a Comment

This site uses Akismet to reduce spam. Learn how your comment data is processed.