Image default
Articles

ಕೋವಿಡ್ ಸಂಕಷ್ಟದಲ್ಲಿ ತೀವ್ರ ಸ್ಪಂದನೆ- ಚಿಕ್ಕಪೇಟೆ ಶಾಸಕರ ಅನುಕರಣೀಯ ಕಾರ್ಯಗಳ ಇಣುಕುನೋಟ

ಯಾರೂ ಊಹಿಸಿರದ, ನಿರೀಕ್ಷಿಸಿರದ  ‘ಕೊರೋನಾ’ ದೇಶವನ್ನು ಆವರಿಸಿ, ಜನತೆಯನ್ನು ದಿಕ್ಕೆಡಿಸುತ್ತಿರುವ ಸಂಕಟದ ದಿನಗಳು ಇವು. ಜನಸಮುದಾಯದ ಎಲ್ಲ ಚಟುವಟಿಕೆಗಳೂ ಸ್ತಬ್ಧವಾಗಿವೆ. ದೇಶದ ಎಲ್ಲ ಅರ್ಥಿಕ ಚಟುವಟಿಕೆಗಳೊಂದಿಗೆ ಬದುಕಿನ ದೈನಂದಿನ ದಿನಚರಿಯನ್ನೇ ಬುಡಮೇಲು ಮಾಡಿರುವ ‘ಕೊರೋನಾ’ ಎಂಬ  ಕರಾಳ ಅಧ್ಯಾಯವನ್ನು ನಾವು ಎದುರಿಸಲೆಬೇಕಿದೆ. ಪ್ರತಿ ವರ್ಗಕ್ಕೂ ತಮ್ಮದೇ ಆದ ಸಮಸ್ಯೆ ಇದೆ. ಆದರೆ ಎರಡು ಹೊತ್ತಿನ ತುತ್ತಿಗಾಗಿ ಕಷ್ಟಪಟ್ಟು ದುಡಿವ ಬಡಜನತೆ ಇದರಿಂದ ತತ್ತರಿಸಿದೆ ಎಂದರೆ ಅತಿಶಯೋಕ್ತಿಯಲ್ಲ.  ಕೂಲಿಯನ್ನೇ ನಂಬಿಕೊಂಡಿರುವ ಬಡವರು, ಕಾರ್ಮಿಕ -ಶ್ರಮಿಕ ವರ್ಗ ಮುಂದಿನ ದಾರಿ ಕಾಣದೆ ಕಂಗಾಲಾಗಿದೆ. ಸರ್ಕಾರ ಅವರ ನೆರವಿಗೆ  ಬಂದಿದ್ದರೂ , ಅವರನ್ನು ಹತ್ತಿರದಿಂದ ಕಾಣುವ, ದಿನ ಬೆಳಗಾದರೆ ಅವರ ಕಷ್ಟಗಳಿಗೆ  ಕಣ್ಣು-ಕಿವಿಯಾಗುವ ಸ್ಥಳೀಯ ಜನನಾಯಕರು ಅವರ ನೆರವಿಗೆ ಧಾವಿಸಿರುವ, ನೀಡುತ್ತಿರುವ ಸಹಾಯಹಸ್ತ ಸ್ಮರಣೀಯ ಮತ್ತು ಅವರ ಸೇವಾ ಮನೋಭಾವ-ಮಾನವೀಯ ಕಳಕಳಿ ಸ್ತುತ್ಯಾರ್ಹ.

ಈ ನಿಟ್ಟಿನಲ್ಲಿ ಚಿಕ್ಕಪೇಟೆ  ಕ್ಷೇತ್ರದ ಶಾಸಕರಾದ ಶ್ರೀ ಉದಯ ಗರುಡಾಚಾರ್ ಅವರು, ಶಾಸಕರಾಗಿ ಚುನಾಯಿತರಾದ ಮೊದಲದಿನದಿಂದ ತಮ್ಮ ದಿನದ ಬಹುಪಾಲು ಸಮಯವನ್ನು ಜನಪರ ಕಾಳಜಿಯ ಕೆಲಸ-ಕಾರ್ಯಗಳಲ್ಲಿ ಸಂಪೂರ್ಣ  ತೊಡಗಿಸಿಕೊಂಡಿದ್ದಾರೆಂದೇ ಹೇಳಬಹುದು.  ಸಾಮಾನ್ಯವಾಗಿ ಚುನಾವಣೆ ಮುಗಿದ ಮೇಲೆ ಮತ ನೀಡಿದ ಮತದಾರರ ಕ್ಷೇಮಾಭಿವೃದ್ಧಿಯತ್ತ ನಿಗಾ ವಹಿಸುವ ರಾಜಕಾರಣಿಗಳು ವಿರಳ. ನಿಷ್ಠುರವಾಗಿ  ಹೇಳಬೇಕೆಂದರೆ  ಕೆಲಸವಾದ ಮೇಲೆ ನಿರ್ಲಕ್ಷಿಸುವ  ಪ್ರವೃತ್ತಿ ಸರ್ವೇಸಾಮಾನ್ಯ. ಆದರೆ  ಇದಕ್ಕೆ ಅಪವಾದ ಚಿಕ್ಕಪೇಟೆ ಶಾಸಕರಾದ  ಉದಯ ಗರುಡಾಚಾರ್.  ಖ್ಯಾತ ಉದ್ಯಮಿಗಳಾದ ಅವರು ಇಷ್ಟು ಸಮಯವನ್ನು ಹೇಗೆ ಹೊಂದಿಸಿಕೊಳ್ಳುತ್ತಾರೆಂಬುದೇ ದೊಡ್ಡ ಅಚ್ಚರಿ. ಅದಕ್ಕೂ ಮಿಗಿಲಾಗಿ ‘ಗರುಡಾ ಫೌಂಡೇಷನ್ ‘ ಸಂಸ್ಥಾಪಕರಾದ ಅವರ ಪತ್ನಿ ಶ್ರೀಮತಿ ಮೇದಿನಿ ಉದಯ್ ಅವರು ಸದಾ ಅವರೆಲ್ಲ ಚಟುವಟಿಕೆಗಳಿಗೆ ಬೆನ್ನೆಲುಬಾಗಿರುವುದು ನಿಜಕ್ಕೂ ಬೆರಗುಗೊಳಿಸುವ ಸಂಗತಿ. ಪ್ರತಿದಿನ ಅವರ ಕ್ಷೇತ್ರದ ಒಂದಲ್ಲ ಒಂದು  ವಾರ್ಡ್-ವಿಭಾಗ ಗಳಲ್ಲಿನ ಜನರ ಸಮಸ್ಯೆಗಳನ್ನು ಆಲಿಸುತ್ತ, ಅವುಗಳ ನಿವಾರಣೆಯತ್ತ ಕ್ರಮಕೈಗೊಂಡು,  ಕಾರ್ಯಪ್ರಗತಿ ಸಾಧಿಸುತ್ತ ಜನರ ಮಧ್ಯೆಯೇ ಬೆರೆತು ಹೋಗಿರುವ ದೃಶ್ಯ ಕಾಣಬಹುದಾಗಿದೆ.

ಇಂದು ಬೇರೆಲ್ಲ ಸಮಸ್ಯೆಗಳಿಗಿಂತ ‘ಕೊರೊನಾ’ ಉಂಟುಮಾಡಿರುವ ದೈನಂದಿನ ಜೀವನಪ್ರಶ್ನೆ ಸವಾಲಾಗಿ ಕಾಡುತ್ತಿದೆ. 

ಕೋವಿಡ್ ಸಂಕಷ್ಟ; ಜನರ ಜೊತೆಗಿದ್ದ ಜನನಾಯಕರು

ಉದಯ್ ಗರುಡಾಚಾರ್ ದಂಪತಿಗಳ ಮಾದರೀ ಕಾರ್ಯಕ್ರಮಗಳು 

‘ಕೊರೋನಾ’ ಸಣ್ಣ ವೈರಾಣುವೇ ಆದರೂ ಇಡೀ ಜಗತ್ತನ್ನೇ ಆವರಿಸಿಕೊಂಡು ತತ್ತರಿಸುವಂತೆ ಮಾಡಿದೆ. ಇಂದು, ಭಾರತದಲ್ಲಿ ಲಕ್ಷಾಂತರ ಜನರ ಬದುಕುಗಳು ಬೀದಿಗೆ ಬಂದಿದ್ದರೆ,11 ಸಾವಿರಕ್ಕೂ ಹೆಚ್ಚು ಜನ ಕೊರೋನಾಗೆ ಬಲಿಯಾಗಿ ಜೀವ ಕಳೆದುಕೊಂಡಿದ್ದಾರೆ. ಲಕ್ಷಾಂತರ ಮಂದಿ ಈ ರೋಗದ ಕ್ರೂರಮುಷ್ಟಿಗೆ ಸಿಲುಕಿದ್ದಾರೆ. ಇದರ ಪರಿಣಾಮವಾಗಿ ಬದುಕು ಅಲ್ಲೋಲ ಕಲ್ಲೋಲವಾಗಿ ಮತ್ತೆ ಹೊಸದಾಗಿ ಜೀವನ ಕಟ್ಟಿಕೊಳ್ಳುವ ಅನಿವಾರ್ಯತೆಯ ಪೆಡಂಭೂತ ಎದುರಾಗಿದೆ. ಇದರ ಹಿಡಿತದಿಂದ ಪಾರಾಗುವ ಕಲ್ಪನೆ ಅಯೋಮಯವಾಗಿದೆ. ಕೊರೋನಾಗೆ ಲಸಿಕೆ ಕಂಡು ಹಿಡಿಯುವ ದಿನಗಳು ಇನ್ನೂ ಬಹು ದೂರ ಇವೆ. ವಿಶ್ವದಾದ್ಯಂತ ವಿಜ್ಞಾನಿಗಳು ಈ ಬಗ್ಗೆ ಸಂಶೋಧನೆಗೆ ತೊಡಗಿದ್ದರೂ ಸದ್ಯಕ್ಕಂತೂ ಈ ರೋಗಕ್ಕೆ ಯಾವ ಮದ್ದೂ ಇಲ್ಲವಾಗಿದೆ!…ಹೀಗಾಗಿ ದೇಶದ ಜನರ ಆತಂಕ ಮುಗಿಲು ಮುಟ್ಟಿದೆ, ಜಾಗ್ರತಾ ಕ್ರಮವಾಗಿ ಲಾಕ್ಡೌನ್ ಮಾಡಲಾಗಿದ್ದರೂ ಕೋವಿಡ್ ನ  ಪ್ರತಾಪ ಮುಂದುವರೆದೇ ಇದೆ. ಜನಸಾಮಾನ್ಯರು ಕೊರೋನಾಗೆ ಹೆದರಿ ಕಂಗಾಲಾಗಿರುವ  ಇಂತಹ ಸಂದರ್ಭದಲ್ಲಿ ಜನರಿಗೆ ಧೈರ್ಯ ತುಂಬುತ್ತಾ ಅವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸಬೇಕಾದ್ದು ಜನನಾಯಕರ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತೀವ್ರವಾಗಿ ಸ್ಪಂದಿಸುತ್ತಿರುವುದು ಸ್ಪಷ್ಟ ದೃಗೋಚರವಾಗಿದೆ. ಇಂಥ ಸಂಕಷ್ಟದ ವೇಳೆಯಲ್ಲಿ ಹಲವಾರು ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ನಿರಂತರವಾಗಿ ಜನರಲ್ಲಿ ಧೈರ್ಯ ತುಂಬಿ, ಜನಸಾಮಾನ್ಯರ ಅಗತ್ಯತೆಗೆ ತಕ್ಕಂತೆ ಆಹಾರ ಸಾಮಗ್ರಿಗಳ ಕಿಟ್ ಗಳು, ಔಷಧೀಯ ಕಿಟ್ ಗಳನ್ನು ವಿತರಿಸಿ ಮಾನವೀಯ ಕಾಳಜಿಯನ್ನು ತೋರುತ್ತಲೇ ಬಂದಿದ್ದಾರೆ. 

ಕರ್ನಾಟಕದ ಅದರಲ್ಲೂ ಬೆಂಗಳೂರಿನಲ್ಲಿ ವಾಸಿಸುವ ಕೂಲಿ ಕಾರ್ಮಿಕರೇ ಮುಂತಾದ ಅನೇಕ ಬಡ ಜನತೆಯ ನೆರವಿಗೆ ಧಾವಿಸಿರುವ ಕೆಲವು ಜನನಾಯಕರ ಪೈಕಿ ಚಿಕ್ಕಪೇಟೆ ಶಾಸಕರಾದ ಉದಯ ಗರುಡಾಚಾರ್ ಮತ್ತು ಅವರ ಸಂಸ್ಥೆ ‘ಗರುಡಾ ಫೌಂಡೆಶನ್’ ಸಲ್ಲಿಸುತ್ತಿರುವ ಸೇವೆ ಗಮನಾರ್ಹವಾಗಿ ಎದ್ದು ಕಾಣುತ್ತಿದ್ದು ಅವರ ಕಾಳಜಿ ಮತ್ತು ಬದ್ಧತೆಗಳು ಉಳಿದವರಿಗೆ ಮಾದರಿಯನ್ನು ಹಾಕಿಕೊಟ್ಟಿದೆ.

ದೇಶಾದ್ಯಂತ ಲಾಕ್ಡೌನ್ ಆದ ದಿನದಿಂದ ಇದುವರೆಗೂ ಸತತ ಎರಡೂವರೆ ತಿಂಗಳುಗಳ ಕಾಲ ತಮ್ಮ ಕ್ಷೇತ್ರದ ಜನತೆಯ ಮೂಲಭೂತ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಯಶಸ್ಸು ಕಂಡವರು ಚಿಕ್ಕಪೇಟೆ ಶಾಸಕರಾದ ಶ್ರೀಯುತ ಉದಯ್ ಬಿ ಗರುಡಾಚಾರ್ ಅವರು.

ಲಾಕ್ಡೌನ್ ಮಾಡುವ ಮುನ್ಸೂಚನೆ ಸಿಗುತ್ತಿದ್ದಂತೆಯೇ ತಮ್ಮ ಕ್ಷೇತ್ರದ ಜನತೆಯ ಕುಂದುಕೊರತೆ ಆಲಿಸುವ ಸಲುವಾಗಿ ಅವರು, ತಮ್ಮ ಶಾಸಕರ ಕಛೇರಿ ಮುಖಾಂತರ ಸಹಾಯವಾಣಿ ಆರಂಭಿಸಿದರು. ಜನರ ಕಷ್ಟಗಳನ್ನು ಖುದ್ದು ಗರುಡಾಚಾರ್ ದಂಪತಿಗಳು ವಿಚಾರಿಸಿ ಅವರಿಗೆ  ಬೇಕಾದ ಅಗತ್ಯ ಆಹಾರ ಪೊಟ್ಟಣಗಳು ಹಾಗೂ ಆಹಾರ  ಸಾಮಗ್ರಿಗಳ ಕಿಟ್ ಗಳನ್ನು ನೀಡುತ್ತಾ ಬಂದರು. ಆ ಕ್ಷಣಕ್ಕೆ ಓಡಾಟದ ಸಮಸ್ಯೆ, ಸ್ವಯಂಸೇವಕರ ಸಮಸ್ಯೆ ಎದುರಾದರೂ ಛಲ ಬಿಡದೆ ಸಾದ್ಯವಾದಷ್ಟು ಚಿಕ್ಕಪೇಟೆ ಕ್ಷೇತ್ರದ ಅಗತ್ಯವಿರುವವರಿಗೆಲ್ಲ ‘ಗರುಡ ಫೌಂಡೇಶನ್’ ಮುಖಾಂತರ ಆಹಾರ ಪೊಟ್ಟಣಗಳನ್ನು ವಿತರಿಸಲಾಯಿತು.  ತಮ್ಮ ಸಂಸ್ಥೆ ಗರುಡ ಫೌಂಡೇಶನ್ ಸಹಯೋಗದೊಂದಿಗೆ, ಶಾಸಕರು ಹಗಲಿರುಳೂ ಅಪಾರ ಪರಿಶ್ರಮ-ಕಾಳಜಿ ವ್ಯಕ್ತಪಡಿಸುತ್ತಾ, ತಮ್ಮ ಸ್ವಂತ ಹಣದಿಂದ ಆಹಾರ ಸಾಮಗ್ರಿಗಳ ಕಿಟ್ ಗಳನ್ನು ಅವಶ್ಯಕತೆಯುಳ್ಳವರಿಗೆ ಕೊಡ ಮಾಡುತ್ತಿರುವುದು ಸ್ತುತ್ಯಾರ್ಹ ಕಾರ್ಯ . ಸಾಕಷ್ಟು ಪ್ರಮಾಣದಲ್ಲಿ ಅಕ್ಕಿ ಬೇಳೆ,ಎಣ್ಣೆ, ಸಕ್ಕರೆ, ಗೋಧೀ ಹಿಟ್ಟು ಉಪ್ಪು, ಮುಂತಾದ ದಿನಬಳಕೆಯ ದಿನಸಿ ಸಾಮಗ್ರಿಗಳನ್ನೊಳಗೊಂಡ ಕಿಟ್‌ಗಳನ್ನು ಗೃಹರಕ್ಷಕ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರು, ಕ್ಷೌರಿಕರು ಸೇರಿದಂತೆ ಅನೇಕ ಸಂಖ್ಯೆಯ ಜನರಿಗೆ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಜನರಿಗೆ ವಿತರಿಸಿದ್ದಾರೆ, ವಿತರಿಸುತ್ತಲೇ ಇದ್ದಾರೆ ಎಂಬುದು ಮಾನವೀಯ ಕಳಕಳಿಯನ್ನು ಧ್ವನಿಸುತ್ತದೆ.

ಇದುವರೆಗೆ 30000 ಆಹಾರ ಕಿಟ್ ಗಳನ್ನು ಸ್ವತಃ ಶಾಸಕರು ವಿತರಿಸಿದ್ದಾರೆ. ಇದಲ್ಲದೆ, ಅವರು, ಸರ್ಕಾರದ ಕಾರ್ಮಿಕ ಇಲಾಖೆ, ಮಹಾನಗರಪಾಲಿಕೆಯ ವತಿಯಿಂದ ನೀಡಲಾದ 5000 ಕಿಟ್ ಗಳನ್ನೂ ಜನರಿಗೆ ಸಮರ್ಥವಾಗಿ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜನತೆಯ ಮೊಗದಲ್ಲಿ ಸಮಾಧಾನ ಕಂಡು ಅವರಿಗೆ ತೃಪ್ತ ಭಾವ.

ಕೊರೋನಾ ರೋಗ, ಯಾರೂ ಊಹಿಸದ ರೀತಿಯಲ್ಲಿ ಉಂಟುಮಾಡಿದ ಆಘಾತದ ಜೊತೆಗೆ ಇದರ ನಿರ್ವಹಣೆ ಹೇಗೆ ಮಾಡಬೇಕು ಎಂಬುದು ಪ್ರತಿಯೊಬ್ಬರಿಗೂ ಹೊಸ ಅನುಭವವನ್ನು ನೀಡಿದೆ. ಇಂತಹ ಸಂಕೀರ್ಣ ಘಟ್ಟದಲ್ಲಿ ಕೂಲಿ ಇಲ್ಲದೆ, ಕುಟುಂಬ ನಿರ್ವಹಣೆ ಗುರುತರವೆನಿಸಿದ ಕಂಗಾಲಾಗಿರುವ ದಿನಗಳಲ್ಲಿ ಬಡಜನತೆಗೆ ನೆರವಾಗುತ್ತಿರುವ ಶಾಸಕ ಉದಯಗರುಡಾಚಾರ್-ಮೇದಿನಿ ದಂಪತಿಗಳ ಸದ್ದಿಲ್ಲದ ನಿರ್ವ್ಯಾಜ ಸಮಾಜಮುಖೀ ಕಾರ್ಯ ಎಲ್ಲರ ಶ್ಲಾಘನೆಗೆ ಪಾತ್ರವಾಗಿದೆ.

‘ಕೋವಿಡ್ ಸಹಾಯವಾಣಿ’

ಕೋವಿಡ್ ಮಹಾಮಾರಿಯಿಂದಾಗಿ ಜನರು ಮನೆಯಿಂದ ಹೊರ ಬರಲಾಗದ ಪರಿಸ್ಥಿತಿ ಇದ್ದಾಗ ಅವರಿಗೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಬೇಕಾದ ವಿಷಮ ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಶಾಸಕರು  ತಮ್ಮ ಶಾಸಕರ ಕಛೇರಿಯಲ್ಲಿ ‘ಕೋವಿಡ್ ಸಹಾಯವಾಣಿ’ ತೆರೆಯುವ ಮೂಲಕ ಜನರ ನೆರವಿಗೆ ನಿಂತರು. ಜನರ ಹತ್ತು-ಹಲವಾರು ಸಮಸ್ಯೆಗಳಿಗೆ ಪರಿಹಾರ ನೀಡುತ್ತಿರುವ ಶಾಸಕರು ಸ್ಥಾಪಿಸಿರುವ ‘ಕೋವಿಡ್ ಸಹಾಯವಾಣಿ’ ಉತ್ತಮ ಕಾರ್ಯವನ್ನು ನಿರ್ವಹಿಸುತ್ತಿದೆ. ಕಷ್ಟದಲ್ಲಿರುವ ಜನರ ಆಹಾರ ಸಮಸ್ಯೆ, ಔಷಧಿ-ಚಿಕಿತ್ಸೆ, ವೈದ್ಯಕೀಯ ನೆರವು ಮುಂತಾದ ಇನ್ನೂ ಅನೇಕ ವಿಷಯಗಳ ಬಗ್ಗೆ ವಿಚಾರಣೆಗಳು ಪ್ರತಿದಿನ ಸಹಾಯವಾಣಿಗೆ ನೂರಾರು ಕರೆಗಳು ಬರುತ್ತಿದ್ದು,  ಶಾಸಕರ ನಿರ್ದೇಶನದಂತೆ ಕರ್ತವ್ಯ ನಿರ್ವಹಿಸುತ್ತಿರುವ ಸ್ವಯಂಸೇವಕರು ಪ್ರತಿಯೊಬ್ಬರಿಗೂ ಆದ್ಯತೆಯ ಮೇಲೆ ಸ್ಪಂದಿಸುತ್ತ ಆದರ್ಶಯುತವಾಗಿ ಜನಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಕೆ.ಆರ್.ರಸ್ತೆಯಲ್ಲಿರುವ ಶಾಸಕರ ಕಚೇರಿಯ ಬಾಗಿಲು ಸಹಾಯಹಸ್ತಕ್ಕಾಗಿ ಸದಾ ಮುಕ್ತವಾಗಿರುತ್ತದೆ.

Related posts

ಹೆಜ್ಜೆ ಗೆಜ್ಜೆ- ಹರಿದಾಸ ಸಾಹಿತ್ಯದಲ್ಲಿ ನೃತ್ಯಾವಲೋಕನ

YK Sandhya Sharma

Musical journey of Sangeetha Kalaratna Vidwan S. Shankar

YK Sandhya Sharma

ರಂಗಕರ್ಮಿ ಅಬ್ಬೂರು ಜಯತೀರ್ಥ ಅವರ ಜೀವನ ಮತ್ತು ಸಾಧನೆಗಳ ಒಂದು ಪಕ್ಷಿನೋಟ

YK Sandhya Sharma

Leave a Comment

This site uses Akismet to reduce spam. Learn how your comment data is processed.