















ಖ್ಯಾತ ‘ಸುಕೃತಿ ನಾಟ್ಯಾಲಯ’ ನೃತ್ಯಸಂಸ್ಥೆಯ ಗುರು ಹೇಮಾ ಪ್ರಭಾತ್ ಅಂತರರಾಷ್ಟ್ರೀಯ ನೃತ್ಯ ಕಲಾವಿದೆ-ನೃತ್ಯ ಸಂಯೋಜಕಿ ಮತ್ತು ಚಲನಚಿತ್ರ ಅಭಿನೇತ್ರಿಯಾಗಿ ವಿಖ್ಯಾತಿ ಪಡೆದವರು. ದೇಶ-ವಿದೇಶಗಳಲ್ಲಿ ಅನೇಕ ನೃತ್ಯಪ್ರದರ್ಶನ ನೀಡಿರುವ ಇವರು ವಿಶ್ವಪ್ರಸಿದ್ಧಿಯ ‘ಪ್ರಭಾತ್ ಕಲಾವಿದರು’ ನೃತ್ಯತಂಡದ ಅನೇಕ ನೃತ್ಯರೂಪಕಗಳಲ್ಲಿ ಭಾಗವಹಿಸಿ ರಸಿಕರಿಂದ ಮೆಚ್ಚುಗೆ ಪಡೆದವರು. ಇಂಥ ನುರಿತ ಗುರುಗಳ ಸಮರ್ಥ ಗರಡಿಯಲ್ಲಿ ನಾಟ್ಯತರಬೇತಿ ಪಡೆದ ಕಲಾಶಿಲ್ಪ ಕು. ಸ್ಪಂದನಾ ಸುಭಾಷ್ ಬದ್ಧತೆಯುಳ್ಳ ಉದಯೋನ್ಮುಖ ಕಲಾವಿದೆ. ಕಳೆದ ಎಂಟುವರ್ಷಗಳಿಂದ ಬದ್ಧತೆಯಿಂದ ನೃತ್ಯಾಭ್ಯಾಸ ಮಾಡುತ್ತಿರುವ ಸ್ಪಂದನಾ, ಇದೀಗ ಈ ತಿಂಗಳ 9 ತಾ. ಶನಿವಾರ ಸಂಜೆ5.15ಕ್ಕೆ ವಯ್ಯಾಲಿಕಾವಲ್ ನ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ವಿದ್ಯುಕ್ತವಾಗಿ ರಂಗಪ್ರವೇಶ ಮಾಡಲಿದ್ದಾಳೆ. ಅವಳ ನೃತ್ಯ ಸೊಬಗನ್ನು ಕಣ್ತುಂಬಿಕೊಳ್ಳಲು ಎಲ್ಲ ಕಲಾರಸಿಕರಿಗೂ ಆದರದ ಸುಸ್ವಾಗತ.
ಶ್ರೀಮತಿ ಡಾ.ಲೀನಾ ಸುಭಾಷ್ ಮತ್ತು ಡಾ. ಆರ್.ಸಿ.ಸುಭಾಷ್ ಅವರ ಸುಪುತ್ರಿಯಾದ ಸ್ಪಂದನಾಗೆ ನೃತ್ಯ ಬಾಲ್ಯದ ಒಲವು. ಅವಳ ಅದಮ್ಯ ನಾಟ್ಯಾಸಕ್ತಿಯನ್ನು ಗಮನಿಸಿದ ತಾಯಿ ಕೂಡಲೇ ಅವಳನ್ನು ಗುರು ಹೇಮಾ ಪ್ರಭಾತ್ ಅವರಲ್ಲಿ ನೃತ್ಯ ಕಲಿಯಲು ಸೇರ್ಪಡೆ ಮಾಡಿದರು. ಏಳುವರ್ಷಗಳ ಬಾಲಕಿ ಅದಮ್ಯ ಒಲವು-ಆಸಕ್ತಿಗಳಿಂದ ಭರತನಾಟ್ಯ ಅಭ್ಯಾಸ ಮಾಡುತ್ತಾ, ಗುರುಗಳ ಮಾರ್ಗದರ್ಶನದಲ್ಲಿ ನೃತ್ಯದ ಎಲ್ಲ ಆಯಾಮಗಳ ಪರಿಚಯ ಮಾಡಿಕೊಂಡಳು. ಸುಕೃತಿ ನಾಟ್ಯಾಲಯದ ಎಲ್ಲ ನೃತ್ಯರೂಪಕಗಳಲ್ಲಿ ಭಾಗವಹಿಸಿದ್ದಲ್ಲದೆ ನಾಡಿನಾದ್ಯಂತ ಅನೇಕ ನೃತ್ಯ ಪ್ರದರ್ಶನ ನೀಡಿದ್ದು ಇವಳ ವಿಶೇಷ. ಸುಕೃತಿ ನಾಟ್ಯಾಲಯ ನಡೆಸುವ ಪ್ರಾರಂಭಿಕ ಮತ್ತು ಪರಿಣಿತಿ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿರುವ ಸ್ಪಂದನಾ, ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯದ ಪ್ರವೇಶಿಕಾ ಪೂರ್ಣ ಮತ್ತು ಮಧ್ಯಮ-ಪ್ರಥಮ ಪರೀಕ್ಷೆಗಳಲ್ಲಿ ಜಯಶಾಲಿಯಾಗಿದ್ದಾಳೆ.
ಬೆಂಗಳೂರಿನ ರಾಜರಾಜೇಶ್ವರಿ ನಗರದ ‘ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಶಾಲೆ’ಯಲ್ಲಿ ಹತ್ತನೆಯ ತರಗತಿಯಲ್ಲಿ ಓದುತ್ತಿರುವ ಇವಳು ಓದಿನಲ್ಲೂ ಜಾಣೆ. ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಮುಂದು. ಅಭಿನಯದಲ್ಲಿ ಪ್ರತಿಭಾವಂತೆಯಾದ ಸ್ಪಂದನಾ, ಖ್ಯಾತ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ‘ಟೆಂಟ್ ಸಿನಿಮಾ’ ಸಂಸ್ಥೆಯಿಂದ ಅಭಿನಯ ತರಬೇತಿ ಹೊಂದಿದ್ದು ಅನೇಕ ಬೀದಿನಾಟಕಗಳಲ್ಲಿ ಭಾಗವಹಿಸಿದ್ದಾಳೆ. ಜೊತೆಗೆ ‘ತಾಯಿ ಕಸ್ತೂರಬಾ ಗಾಂಧೀ’ ಚಲನಚಿತ್ರದಲ್ಲೂ ಅಭಿನಯಿಸಿರುವ ಹೆಗ್ಗಳಿಕೆ ಇವಳದು. ಖ್ಯಾತ ಲೇಖಕ ಬರಗೂರು ರಾಮಚಂದ್ರಪ್ಪ ನಿರ್ದೇಶನದ ಈ ಚಿತ್ರ ಲಾಸ್ ಏಂಜಲೀಸ್ ಚಲನಚಿತ್ರೋತ್ಸವ’ದಲ್ಲಿ ಪ್ರದರ್ಶಿತವಾಗಿದೆ.
ಹೆತ್ತವರ ಅಪಾರ ಪ್ರೋತ್ಸಾಹ ಹಾಗೂ ಗುರು ಹೇಮಾ ಪ್ರಭಾತ್ ಅವರ ಉತ್ತಮ ಮಾರ್ಗದರ್ಶನದಲ್ಲಿ ನೃತ್ಯರಂಗದಲ್ಲಿ ಮುನ್ನಡೆಯುತ್ತಿರುವ ಸ್ಪಂದನಾಗೆ ನೃತ್ಯಕ್ಷೇತ್ರದಲ್ಲಿ ಉತ್ತಮ ಭವಿಷ್ಯವಿದೆ. ರಂಗಪ್ರವೇಶದ ಸುಸಂದರ್ಭದಲ್ಲಿ ಅವಳಿಗೆ ಹಾರ್ದಿಕ ಅಭಿನಂದನೆಗಳು.

