Image default
Poems

ಉರಿದುಹೋದ ಕನಸುಗಳು

ಹೆಣ್ಣೆದೆಯ ಅಗ್ನಿಕುಂಡದಲಿ
ಧಗಧಗನುರಿದು
ಹುರುಪಳಿಸಿಹೋದ
ರಮ್ಯಭಾವನೆಗಳ ಕಾವಿನಲಿ
ಬೆಚ್ಚನೆ ಮೈ
ಕಾಯಿಸಿಕೊಳ್ಳುವವರು
ಅದೆಷ್ಟೋ ಮಂದಿ

ಮನಸ ಪಕಳೆ
ಪಕಳೆಗಳ ಕೊಯ್ದು
ಉಪ್ಪು ತುಂಬಿ
ಬಾಳಕ ಮಾಡಿ ಕರಿದರೂ
ತೃಪ್ತಿಗಾಣದ ತೆವಲುಗಳು

ಹೆಚ್ಚೇನು ಮೃದು ಮೈಗೆ
ಸೀಮೆಎಣ್ಣೆಯ ಧಾರಾಕಾರ
ಅಭಿಷೇಕ
ದೀಪ ಧೂಪದ
ಮಂಗಳಾರತಿ
ಕಣ್ಮಿಂಚು ಕಣ್ಮಾಯದಲಿ
ಸುಂದರ ಆಕಾರ
ಬೂದಿಗುಡ್ಡೆಯಾಗಿಸುವ
ಪವಾಡ!

ವಿಭೂತಿ ಅನುಭೂತಿ…
ಮೈತುಂಬ ಪಟ್ಟಾಪಟ್ಟಿ ಬಳಿದು
ಕೇಕೆ ಹಾಕುವ
ಭಸ್ಮಾಸುರರದೆಷ್ಟೋ ಮಂದಿ

ಕನಸುಗಳ ಗೋರಿ ಕಟ್ಟಿ
ಎಲುಬು ಚರ್ಮಗಳ ಗೂಡಾಗಿ
ಪ್ರಯಾಸದಿ ದಿನ ಪೋಣಿಸುವ
ಸೋತ ಅಬಲೆಯರ ಬಾಳು
ಉರಿದುರಿದು ಹಣತೆಯಾದ
ಕಡೆಯುಸಿರ ಸೊಡರು

ಏಕೆ…ಏಕಿಷ್ಟು ಹತಾಶೆ?
ಬೆಂಕಿಯೊಡಲಿಗೆ ನುಗ್ಗುವ
ನಕಾಶೆ
ತಾಳಿಕೊಳಮ್ಮ…ತಾಳು
ತನ್ನೊಡಲಲೇ ಬೆಂಕಿ
ಕಟ್ಟಿಕೊಂಡವಳಿಗೆ
ಜಗವ ಸುಡುವುದ
ಹೇಳಿಕೊಡಬೇಕೇ?

Related posts

ಇದು ಬೊಂಬೆಯಾಟವಯ್ಯ

YK Sandhya Sharma

ಎಂಥ ಚೆಂದ

YK Sandhya Sharma

ಕಟು ಸತ್ಯ

YK Sandhya Sharma

Leave a Comment

This site uses Akismet to reduce spam. Learn how your comment data is processed.