Image default
Events

‘Nrutya kalaabhushana Baala Puraskaar-2023’ – Master Arnav Raj

ಮಾ. ಅರ್ಣವ್ ರಾಜ್ ಗೆ ‘ನೃತ್ಯ ಕಲಾಭೂಷಣ ಬಾಲಪುರಸ್ಕಾರ-2023’

 ಶ್ರೀ ಪ್ರಶಾಂತ್ ರಾಜ್ ಮತ್ತು ಪೂಜಾ ರಾಜ್  ಅವರ 11 ವರ್ಷದ ಸುಪುತ್ರ ಅರ್ಣವ್ ರಾಜ್ ಭರತನಾಟ್ಯದ ಬಾಲಪ್ರತಿಭೆ. ನೃತ್ಯಕಲೆ ಅವನಿಗೊಲಿದು ಬಂದ ದೈವದತ್ತ ವರ. ಅಂತರರಾಷ್ಟ್ರೀಯ ನೃತ್ಯಕಲಾವಿದ ಮತ್ತು ‘ಶಿವಪ್ರಿಯ’ ನೃತ್ಯಶಾಲೆಯ ಗುರು ಡಾ. ಸಂಜಯ್ ಶಾಂತಾರಾಂ ಅವರಲ್ಲಿ ಸತತ ಪರಿಶ್ರಮದಿಂದ ನೃತ್ಯಾಭ್ಯಾಸ ಮಾಡುತ್ತಿರುವ ಈ ಅನನ್ಯ ಪ್ರತಿಭಾನ್ವಿತನಾದ ಬಾಲಕನಿಗೆ ಇತ್ತೀಚೆಗೆ ಕಲ್ಚುರಲ್ ಫೌಂಡೆಶನ್ ಆಫ್ ಇಂಡಿಯಾ ಮತ್ತು ವಿದರ್ಭ ವಿಭಾಗದ ನೃತ್ಯ ಪರಿಷತ್ತಿನ ಪ್ರತಿಷ್ಠಿತ ರಾಷ್ಟ್ರಮಟ್ಟದ  ‘ನೃತ್ಯ ಕಲಾಭೂಷಣ ಬಾಲಪುರಸ್ಕಾರ-2023’ ಪ್ರಶಸ್ತಿಯನ್ನು ವಿಶ್ವ ದಿನಾಚರಣೆಯಂದು ನೀಡಿ ಸನ್ಮಾನಿಸಲಾಗಿದೆಇಡೀ ಭಾರತಾದ್ಯಂತ ಬಂದಿದ್ದ  150 ನಾಮಿನೇಷನ್ ಗಳಲ್ಲಿ ಚಿ. ಅರ್ಣವ್ ಆಯ್ಕೆಯಾಗಿದ್ದು ಇದು ಅವನ ಪ್ರತಿಭೆಗೆ ಹಿಡಿದ ಕನ್ನಡಿಯಾಗಿದ್ದು, ಇತ್ತೀಚಿಗೆ ಅವನಿಗೆ ನಾಗಪುರದ ಸುರೇಶ ಭಟ್ ಆಡಿಟೋರಿಯಂ ನಲ್ಲಿ ಈ ಉನ್ನತ ಪ್ರಶಸ್ತಿಯನ್ನು  ಪ್ರದಾನ ಮಾಡಲಾಯಿತು.

ನೃತ್ಯ ಬಾಲ್ಯದ ಒಲವು. ಬಹುಶಃ ಅದಕ್ಕಾಗಿಯೇ  ಜನ್ಮತಳೆದಂತೆ ಕಾಣುವ ಈ ಬಾಲಕ ತನ್ನ ವಯಸ್ಸಿಗೂ ಮೀರಿದ ಪರಿಣತಿ-ಸತತ ಅಭ್ಯಾಸ-ಪರಿಶ್ರಮಗಳಿಂದ ಸಾಧನಾಪಥದಲ್ಲಿ ನಡೆಯುತ್ತಿದ್ದಾನೆ. ‘ಬೆಳೆಯುವ ಪೈರು ಮೊಳಕೆಯಲ್ಲೇ’ಎಂಬಂತೆ ಅತ್ಯಂತ ಪ್ರತಿಭಾಶಾಲಿಯಾದ ಇವನು  ಸ್ಕಲ್ವಿ ಇಂಟರ್ನ್ಯಾಷನಲ್ ಶಾಲೆಯಲ್ಲಿ 5 ನೆಯ ತರಗತಿಯಲ್ಲಿ  ಓದುತ್ತಿದ್ದು, ತನ್ನ 8 ನೆಯ ವಯಸ್ಸಿನಿಂದ ಕಳೆದ ಮೂರುವರ್ಷಗಳಿಂದ ಡಾ. ಸಂಜಯ್ ಅವರಲ್ಲಿ ನಿಷ್ಠೆಯಿಂದ ವಿದ್ಯಾರ್ಜಿಸುತ್ತಿದ್ದಾನೆ. ಚುರುಕುಬುದ್ಧಿಯ ಅರ್ಣವನ ಕಲಿಕೆ ಮಿಂಚಿನ ವೇಗದಲ್ಲಿ ಸಾಗುತ್ತಿದ್ದು, ಇವನೀಗಾಗಲೇ ಕುಚಿಪುಡಿ ಮತ್ತು ಕಥಕ್ ಅಲ್ಲದೆ ಜಾನಪದ ನೃತ್ಯಗಳಲ್ಲೂ ತರಬೇತಿ ಪಡೆಯುತ್ತಿರುವ ಅಗ್ಗಳಿಕೆ ಹೊಂದಿದ್ದಾನೆ.

 ರಂಗದ ಮೇಲೆ ಪಾದರಸದಂತೆ ವೇದಿಕೆಯ ಉದ್ದಗಲಕ್ಕೂ ಚಿಗರೆಮರಿಯಂತೆ ಕುಪ್ಪಳಿಸಿ, ಹೆಜ್ಜೆಗಳನ್ನು ಹಾಕುತ್ತ, ಮಿಂಚಿನ ವೇಗದ ಜತಿಗಳನ್ನು ಸುಮನೋಹರವಾಗಿ ನಿರೂಪಿಸುವ ಈ ಪ್ರತಿಭಾನ್ವಿತ ನೃತ್ಯ ನಿಪುಣ ನೋಡುಗರನ್ನು ಬೆಕ್ಕಸ ಬೆರಗುಗೊಳಿಸುತ್ತಾನೆ. ಸುಮನೋಹರ ಭಂಗಿಗಳನ್ನು ಪ್ರದರ್ಶಿಸುತ್ತ ಗಂಟೆಗಟ್ಟಲೆ ವೇದಿಕೆಯ ಮೇಲೆ ನಿರಾಯಾಸವಾಗಿ ನರ್ತಿಸುವ ಅರ್ಣವನ ಚೈತನ್ಯ, ಪುಟಿಯುವ ಉತ್ಸಾಹ ಅನನ್ಯ.

ಗುರು ಸಂಜಯ್ ಶಾಂತಾರಾಂ ಅವರೊಂದಿಗೆ ದೇಶ- ವಿದೇಶಗಳಲ್ಲೂ ಅನೇಕ ನೃತ್ಯ ಪ್ರದರ್ಶನ ನೀಡಿದ ಗರಿಮೆ ಇವನದು. ಈಗಾಗಲೇ ‘ಗೆಜ್ಜೆಪೂಜೆ’, ‘ರಂಗಪ್ರವೇಶ’ ಮತ್ತು  ‘ಗುರುವಂದನೆ’ಯನ್ನೂ ನೆರವೇರಿಸಿಕೊಂಡಿರುವ ಇವನು ಕಿರಿಯ ಸಾಧಕನೆಂದರೆ ಅತಿಶಯೋಕ್ತಿಯಲ್ಲ.

ಅರ್ಣವ್, ‘ಶಿವಪ್ರಿಯ’ದ ಪ್ರಸಿದ್ಧ ನೃತ್ಯರೂಪಕಗಳಾದ  ರೂಪ-ವಿರೂಪ, ಮತ್ಸ್ಯಕನ್ಯ, ಹನುಮಾನ್, ಅಯ್ಯಪ್ಪ, ಅಪೂರ್ವ ಭಾರತ ಮುಂತಾದ ಎಲ್ಲ ನಿರ್ಮಾಣಗಳಲ್ಲೂ ಗಮನೀಯ ಪಾತ್ರವಹಿಸಿ ಕಲಾರಸಿಕರ ಗಮನ ಸೆಳೆದಿದ್ದಾನೆ.

ಅರ್ಣವ್, ಓದಿನಲ್ಲೂ ಜಾಣ. ಕ್ರೀಡೆಗಳಲ್ಲೂ ಮುಂದು. ರಾಜ್ಯಮಟ್ಟದ ಫುಟ್ ಬಾಲ್ ಪಟು ಕೂಡ. ಇವನಿಗೆ ಅನೇಕ ಬಿರುದು-ಸನ್ಮಾನಗಳೂ ಸಂದಿವೆ. ಅವುಗಳಲ್ಲಿ ಪ್ರಮುಖವಾದವು-ನಾಟ್ಯ ಕಲಾಮಣಿ, ನೃತ್ಯ ಇಳಮಯಿಲ್, ನಾಟ್ಯ ಜೀವನ್ ಮತ್ತು ನವರಸ ಬಾಲಕ ಮುಂತಾದವುಗಳು.  

                                                   **************** 

Related posts

Nrityoma Academy of Performing of Arts

Editor

‘ರಥಯಾತ್ರೆ’-ಅಭಿವ್ಯಕ್ತಿಯ ‘ನೃತ್ಯಾರಾಧನೆ’

YK Sandhya Sharma

Rasaananda School of Dance – Bharathanatya Recital

Editor

Leave a Comment

This site uses Akismet to reduce spam. Learn how your comment data is processed.