Image default
Dance Reviews

ಚೇತೋಹಾರಿ ಗುರು-ಶಿಷ್ಯ ಪರಂಪರೆಯ ಒಡಿಸ್ಸಿ ನೃತ್ಯ ಲಾಸ್ಯ

                  ದೇವ ಜಗನ್ನಾಥನ ನಾಡಿನಿಂದ ವಿಶ್ವದಾದ್ಯಂತ ಸಂಚರಿಸುತ್ತಿರುವ, ಭಾರತದ ಶಾಸ್ರೀಯ ನೃತ್ಯ ಕಲೆಗಳಲ್ಲೊಂದಾದ `ಒಡಿಸ್ಸಿ’ ನೃತ್ಯಶೈಲಿ ಸಾಂಪ್ರದಾಯಕತೆ, ಭಕ್ತಿ ಮತ್ತು ಲಾಲಿತ್ಯಗಳ ಆಗರ. ಚೌಕ ಮತ್ತು ತ್ರಿಭಂಗದ ಸೊಬಗಿನ ಶೈಲಿಯೇ ಈ ಒಡಿಸ್ಸಿ ನೃತ್ಯದ ಪ್ರಮುಖ ಆಕರ್ಷಣೆ ಹಾಗೂ ಜೀವಾಳ.

        ಇಂಥ ಲಯ-ಲಾಸ್ಯಮಿಳಿತ `ಗುರು-ಶಿಷ್ಯ ಪರಂಪರೆ’ಯ ಒಡಿಸ್ಸಿ ಜೋಡಿ ನಾಟ್ಯಪ್ರಸ್ತುತಿ ಕಾರ್ಯಕ್ರಮವು, ಇತ್ತೀಚಿಗೆ ಬಸವೇಶ್ವರನಗರದ  `ಕಲಾಯುಗ’ ನೃತ್ಯಮಂದಿರದಲ್ಲಿ ನಡೆಯಿತು. ಗುರು-ಶಿಷ್ಯರು ಒಂದೇ ವೇದಿಕೆಯ ಮೇಲೆ ನರ್ತಿಸುವ ಈ ವಿಶಿಷ್ಟ ಕಾರ್ಯಕ್ರಮವನ್ನು `ಸಾಧನ ಸಂಗಮ ಟ್ರಸ್ಟ್ ’ ನೃತ್ಯಸಂಸ್ಥೆ  ಆಯೋಜಿಸಿತ್ತು.

ಪ್ರಸಿದ್ಧ ನೃತ್ಯಗುರು ಮಾನಸಿ ರಘುನಂದನ್ `ಅಭಿವ್ಯಕ್ತಿ ಡಾನ್ಸ್ ಸೆಂಟರ್ ’ನ ಅಧ್ಯಕ್ಷೆ, ಭರತನಾಟ್ಯ ಹಾಗೂ ಒಡಿಸ್ಸಿ ನೃತ್ಯಶೈಲಿಗಳಲ್ಲಿ ಪ್ರಾವೀಣ್ಯ ಸಾಧಿಸಿದವರು. ಒಡಿಸ್ಸಿ ನೃತ್ಯಶೈಲಿಯ ಬಗ್ಗೆ ಆಳವಾಗಿ ಅಧ್ಯಯನ ಮಾಡಿ, ವಿಶ್ವದಾದ್ಯಂತ ನೃತ್ಯ ಪ್ರದರ್ಶನ-ಉಪನ್ಯಾಸಗಳನ್ನು ನೀಡಿ, ಅನೇಕ ಕಾರ್ಯಾಗಾರಗಳನ್ನು ನಡೆಸಿ ಹೆಸರು ಮಾಡಿದವರು. ಇವರೊಂದಿಗೆ ನರ್ತಿಸಿದವರು ಇವರ ಹಿರಿಯ ಶಿಷ್ಯೆ ಸೌಮ್ಯ ಲೋಹಿತ್. ಗುರು-ಶಿಷ್ಯರು ಜೊತೆ ಜೊತೆಯಾಗಿ ನರ್ತಿಸುವುದಕ್ಕೆ , ಸಮನ್ವಯ ಸಾಧನೆಗೆ  ಮತ್ತು  ಪ್ರಾವಿಣ್ಯ ಪ್ರದರ್ಶನಕ್ಕೆ ಇದೊಂದು ಸವಾಲಾಗಿತ್ತು. ಗುರುವಿನ ಪ್ರತಿಬಿಂಬ ಶಿಷ್ಯೆಯಲ್ಲಿ ಗುರುತಿಸುತ್ತ, ಇಬ್ಬರು ಕಲಾವಿದೆಯರ ಪ್ರತಿಭಾ ಪ್ರದರ್ಶನವನ್ನು ಏಕಕಾಲಕ್ಕೆ ತುಲನೆ ಮಾಡುವ ವೀಕ್ಷಣೆ ನಿಜಕ್ಕೂ ಕುತೂಹಲಕರವಾಗಿತ್ತು. ಸರಿ ಮಿಗಿಲೆಂಬಂತೆ ಗುರು-ಶಿಷ್ಯರಿಬ್ಬರೂ ಉತ್ತಮ ಸಾಂಗತ್ಯದಿಂದ ಅನುಪಮವಾಗಿ ನರ್ತಿಸಿ ನೆರೆದ ರಸಿಕರ ಮೆಚ್ಚುಗೆಗೆ ಪಾತ್ರರಾದರು.  

`ಮಂಗಳಾಚರಣ‘.- ಸಾಂಪ್ರದಾಯಕ ಆರಂಭದ ನೃತ್ಯಪ್ರಸ್ತುತಿ. ಭರತನಾಟ್ಯದಲ್ಲಿ `ಪುಷ್ಪಾಂಜಲಿ’ ಇದ್ದಂತೆ.  ಸಕಲ ದೇವಾನುದೇವತೆಗಳಿಗೆ ನಮನದ ಅರ್ಪಣೆ. ದೇವ ಜಗನ್ನಾಥ, ಭೂಮಾತೆ, ಗುರು-ಹಿರಿಯರು, ಪ್ರೇಕ್ಷಕ ವೃಂದ ಹಾಗೂ ರಂಗಮಂದಿರಕ್ಕೆ ವಿನೀತವಾಗಿ ವಂದಿಸುವ ಬಗೆ ಸುಂದರ ಅಂಗವಿನ್ಯಾಸದಲ್ಲಿ ರೂಪುಗೊಂಡಿತ್ತು. ಪಹಾಡಿ ರಾಗದ ಗಣೇಶಸ್ತುತಿಯಲ್ಲಿ ಕಲಾವಿದೆಯರು , ಮಂದಗತಿಯ ಮೆಲುಹೆಜ್ಜೆಗಳನ್ನಿರಿಸುತ್ತ, ತ್ರಿಭಂಗಿಯಲ್ಲಿ ನಯನ ಮನೋಹರ ಲಾಸ್ಯದ  ಭಂಗಿಗಳನ್ನು ಪ್ರದರ್ಶಿಸಿ ಮನಸೂರೆಗೊಂಡರು.

ಅನಂತರ ನೃತ್ತ ಪ್ರಧಾನವಾದ `ಸ್ಥಾಯಿ’ (ಶಂಕರಾಭರಣ ರಾಗ)ಯನ್ನು ಕಲಾವಿದೆಯರು ತಮ್ಮ ವೈವಿಧ್ಯಪೂರ್ಣ ಅಡವುಗಳ ಪಾದಭೇದಗಳಿಂದ, ಹರಿವ ಜಲದಂಥ ಹಸ್ತಚಲನೆಗಳಿಂದ ಪ್ರದರ್ಶಿಸಿದರು. ಭರತನಾಟ್ಯದಲ್ಲಿನ ಅಲ್ಲರಿಪು-ಜತಿಸ್ವರದಲ್ಲಿರುವಂತೆ ಕೇವಲ ನೃತ್ತಗಳ ವಿವಿಧ ವಿನ್ಯಾಸಗಳ ಸೌಂದರ್ಯವನ್ನು ಬಿತ್ತರಿಸುವ ವಿಶಿಷ್ಟ ಕೃತಿ ಇದು. ಒರಿಸ್ಸಾ ದೇವಾಲಯಗಳಲ್ಲಿರುವ ಮನೋಹರ ಮೂರ್ತಿಗಳ ಶಿಲ್ಪಕಲಾ ಭಂಗಿಗಳನ್ನು ಪುನರ್ರಚಿಸಿ ಅಲ್ಲಿನ ದೈವೀಕ ಕಳೆಯನ್ನು ಕಣ್ಮುಂದೆ ಕಟ್ಟಿದರು. ಆ ಶಿಲಾಸುಂದರಿಯರ ಮೈಮೇಲೆ ಶೋಭಿಸಿದ ಕೊರಳಹಾರ, ಓಲೆ, ಕಂಕಣ, ನೂಪುರ ಮುಂತಾದ ವಿವಿಧ ಆಭರಣಗಳ ಕಲಾವಂತಿಕೆಯನ್ನು ಹಾಗೂ ಸೀರೆಯ ನೆರಿಗೆ-ಸೆರಗುಗಳ ವಯ್ಯಾರದೊಂದಿಗೆ ತಮ್ಮ ಸುಕೋಮಲ ಹಸ್ತಚಲನೆ- ಮುದ್ರೆಗಳ ಮೂಲಕ ಶಿಲಾಬಾಲಿಕೆಯರ ವೈವಿಧ್ಯ ಭಂಗಿಗಳನ್ನು ಸಮರ್ಥವಾಗಿ ಕಟ್ಟಿಕೊಟ್ಟದ್ದು ರಸಪೂರ್ಣವೆನಿಸಿತು. ಹಾಗೆಯೇ ತಮ್ಮ ಚೌಕ ಮತ್ತು ತ್ರಿಭಂಗ ಭಂಗಿಗಳ ಆಂಗಿಕಗಳಿಂದ  ಸಿತಾರ್, ಕರತಾಳ, ಕೊಳಲು, ಮದ್ದಲೆ ಮುಂತಾದ ಸಂಗೀತವಾದ್ಯಗಳನ್ನು ಅಭಿನಯಿಸಿ ತೋರಿದ್ದು ತುಂಬಾ ಮನೋಜ್ಞವಾಗಿತ್ತು. ದೇವಾಲಯದ ವಾಸ್ತುಶಿಲ್ಪ-ಶಿಲಾಕನ್ನಿಕೆಯರ ವೈಶಿಷ್ಟ್ಯವನ್ನು ಅನಾವರಣಗೊಳಿಸುವ ಈ `ಸ್ಥಾಯಿ’ ಯ ಕೇಂದ್ರಭಾವ ಶೃಂಗಾರ ರಸವಾಗಿತ್ತು. ವಿಳಂಬಗತಿಯ ಅಡವುಗಳಿಂದ ಆರಂಭವಾದ ಪ್ರಸ್ತುತಿ ಕ್ರಮೇಣ ತೀವ್ರಗತಿಯೊಂದಿಗೆ ಪರಾಕಾಷ್ಠಕ್ಕೇರಿತ್ತು.

ಜೋಡಿ ನೃತ್ಯ ನೋಡುವುದೇ ಒಂದು ಸೊಗಸು. ಕಲಾವಿದೆಯರು ಕನ್ನಡಿಯನ್ನು ನೋಡಿಕೊಳ್ಳುತ್ತ ಅಲಂಕಾರ ಮಾಡಿಕೊಳ್ಳುವ ಒನಪು-ವಯ್ಯಾರದ ಬಗೆ, ಸಿತಾರ ನುಡಿಸುವ ಲಾಲಿತ್ಯ, ಹಿನ್ನಲೆಯ ಮದ್ದಲೆಯ ದನಿಗೆ ಹೆಜ್ಜೆಗಳನ್ನು ಕಂಪಿಸಿ ಓಲಾಡುವ ಮೃದುಲಾಸ್ಯ-ಮಾದಕ ಭಂಗಿಗಳು ಚೇತೋಹಾರಿಯಾಗಿದ್ದವು.

`ನವದುರ್ಗ’ ಸಾಂಪ್ರದಾಯಕ ಕೃತಿ- (ಪಂಕಜ್ ಚರಣದಾಸ್ ನೃತ್ಯಸಂಯೋಜನೆ)ಯನ್ನು ಗುರು ಮಾನಸಿ ಏಕಾಂಗಿಯಾಗಿ ಪ್ರದರ್ಶಿಸಿದರು. ನವದುರ್ಗೆಯರ ನವರಸಗಳಾಭಿವ್ಯಕ್ತಿಯ ದಿವ್ಯರೂಪವನ್ನು ಪರಿಣಾಮಕಾರಿಯಾಗಿ ನಿರೂಪಿಸಿದರು. ಶುಂಭ-ನಿಶುಂಭ ಮರ್ದನದ ಸಂಚಾರಿಯಲ್ಲಿ ತೋರಿದ ರೌದ್ರಾವೇಶದ ಅಭಿನಯ, ದೇವಿಯ ಪ್ರಸನ್ನರೂಪದ ಅಭಿವ್ಯಕ್ತಿಯಲ್ಲಿ ತೋರಿದ ಸ್ನಿಗ್ಧಭಾವ, ಭಕ್ತಿಸಿಂಚನ, ಸಮರ್ಪಣಾಭಾವ  ಹೃದಯಸ್ಪರ್ಶಿಯಾಗಿತ್ತು. ಭಗವತಿದೇವಿಯ ಸಾಕಾರದಲ್ಲಿ ಕಲಾವಿದೆಯ ಖಚಿತ ಹಸ್ತಮುದ್ರೆಗಳ ಪರಿಪೂರ್ಣತೆ,ರಂಗಾಕ್ರಮಣದಂತೆ ಹಾಕಿದ ವೃತ್ತಾಕಾರದ ಹೆಜ್ಜೆಗಳು, ಮಂಡಿ ಅಡವುಗಳು, ಅಭಿವ್ಯಕ್ತಿಸಿದ ವಿವಿಧಭಾವಗಳ ಸಂಗಮ ಮುದತಂದಿತ್ತು.

`ಶಿವರಕ್ಷಾ ಸ್ತೋತ್ರಂ’ -ಶುದ್ಧ ನೃತ್ಯದ ಕೃತಿಯನ್ನು ಸೌಮ್ಯ, ಆತ್ಮವಿಶ್ವಾಸದಿಂದ, ಕಲಾಪೂರ್ಣವಾಗಿ ಏಕಾಂಗಿಯಾಗಿ ಪ್ರಸ್ತುತಿಪಡಿಸಿದಳು. ಅನುಷ್ಟುಭ್ ಛಂದಸ್ಸಿಗೆ ಅಳವಡಿಸಿದ ಶಿವನ ಮಹಿಮೆಯನ್ನು ವರ್ಣಿಸುವ ಈ ಕೃತಿಯನ್ನು ಸೌಮ್ಯ, ಸುಂದರವಾಗಿ ಅಭಿನಯಿಸಿ ಸೈ ಎನಿಸಿಕೊಂಡಳು. ಶಿವನ ಅಂಗಾಂಗ ಸೌಂದರ್ಯವನ್ನು ಶಿರದಿಂದ ಉಂಗುಷ್ಟದವರೆಗೂ ವರ್ಣಿಸುವ ನಿರೂಪಣೆಯಲ್ಲಿ, ಅವಳು ತನ್ನ ಕಣ್ಣು-ಹುಬ್ಬುಗಳ ಅಲುಗಾಟ, ಕೊರಳು ಕೊಂಕಿಸುವ, ತನುವನ್ನು ಅಲೆಯಂತೆ ಬಳುಕಿಸುವ  ಆಂಗಿಕದಿಂದ, ಪರಿಣಾಮಕಾರಿ ಅಭಿನಯದಿಂದ ನೋಡುಗರ ಹೃದಯ ಗೆದ್ದಳು.

ಅಂತಿಮ ಪ್ರಸ್ತುತಿ ಆನಂದಭೈರವಿ ರಾಗದ `ಪಲ್ಲವಿ’ – ವಿವಿಧ ವಿನ್ಯಾಸದ ಹಸ್ತಚಲನೆ, ಸಶಕ್ತ ಪಾದಕ್ಷಮತೆ, ಶುದ್ಧ ನೃತ್ತದಲ್ಲಿ ಸೌಂದರ್ಯದ ಪರಿಭಾಷೆಯಲ್ಲಿ ಸೊಗಯಿಸಿತು. ಹೂವು ನಿಧಾನವಾಗಿ ಪಕಳೆ ಪಕಳೆಗಳನ್ನು ಬಿಚ್ಚಿಕೊಂಡು ಅರಳುವಂತೆ ನಯವಾಗಿ, ಲಯಾತ್ಮಕ ನಡೆಯ ಮಂದಗತಿಯ ನೃತ್ತಗಳು ಕ್ರಮೇಣ ವೇಗಗತಿಯಲ್ಲಿ ಪರಾಕಾಷ್ಟೆ ತಲುಪಿದ್ದು ಆನಂದದಾಯಕವಾಗಿತ್ತು. ಗುರು-ಶಿಷ್ಯರು ಮೃದುವಾದ ಚಲನೆಗಳಿಂದ ಮೈಯನ್ನು ತ್ರಿಭಂಗದಲ್ಲಿ ಬಳುಕಿಸಿ , ಬಾಗಿಸುತ್ತ ನರ್ತಿಸಿ, ಹೊಸ ಮೆರುಗು ಸ್ಫುರಿಸಿದ್ದು ನಿಜಕ್ಕೂ ಕಣ್ಣಿಗೆ ಹಬ್ಬವಾಗಿತ್ತು.

Related posts

ರಸಾನುಭವ ನೀಡಿದ ಕನ್ನಡ ಕೃತಿಗಳ ಝೇಂಕಾರ

YK Sandhya Sharma

ಅದ್ಭುತ ರಸಾನುಭವದ ‘’ಏಕ’’ಮೇವಾದ್ವಿತೀಯ ನರ್ತನ

YK Sandhya Sharma

ಅಪೂರ್ವ ವರ್ಚಸ್ವೀ ಅಭಿನಯದ ಸಾಕ್ಷಾತ್ಕಾರ

YK Sandhya Sharma

Leave a Comment

This site uses Akismet to reduce spam. Learn how your comment data is processed.