Image default
Dance Reviews

ಚೈತನ್ಯಪೂರ್ಣ ನೃತ್ತಾಭಿನಯದ ಮನೋಜ್ಞ ನೃತ್ಯ

`ಕೇಶವ ನೃತ್ಯ ಶಾಲೆ’ಯ ಭರತನಾಟ್ಯಗುರು ಡಾ.ಬಿ.ಕೆ. ಶ್ಯಾಂಪ್ರಕಾಶ್ ಅವರ ಸಮರ್ಥ ಮಾರ್ಗದರ್ಶನದಲ್ಲಿ ರೂಹುಗೊಂಡ ನೃತ್ಯಪಟು ಬಿ.ಆರ್. ನಂದಕಿಶೋರ್ ತನ್ನ `ರಂಗಪ್ರವೇಶ’ ದಲ್ಲಿ ಪ್ರಸ್ತುತಪಡಿಸಿದ ಮನಮೋಹಕ ನರ್ತನದಿಂದ ತಾನೊಬ್ಬ ಭರವಸೆಯ ಕಲಾವಿದ ಎಂಬುದನ್ನು ಸಾಬೀತುಗೊಳಿಸಿದರು. ಇತ್ತೀಚಿಗೆ ಎ.ಡಿ.ಎ. ರಂಗಮಂದಿರದಲ್ಲಿ ಅವರು ತಮ್ಮ ನೃತ್ತಾಭಿನಯದ ವಿವಿಧ ಆಯಾಮಗಳನ್ನು ಕಲಾರಸಿಕರೆದುರು ಮನೋಜ್ಞವಾಗಿ ಅನಾವರಣಗೊಳಿಸಿದರು.

ವೇದಿಕೆಯ ಮೇಲೆ ಕಾಣಿಸಿಕೊಂಡ ಮೊದಲ ಹೆಜ್ಜೆಯ ಪುಷ್ಪಾಂಜಲಿಯಲ್ಲಿಯೇ ಕಲಾವಿದನ ಅಂಗಶುದ್ಧಿ, ಖಚಿತ ಹಸ್ತ-ಅಡವುಗಳ ಸೊಗಸು ಮನಸೆಳೆಯಿತು. ಗಣೇಶನ ವಿವಿಧ ರೂಪಗಳ ಅರ್ಥಪೂರ್ಣ ಆಂಗಿಕಾಭಿನಯ ಹಾಗೂ ಶ್ರೀರಾಮನ ವೀರೋಚಿತ ಸುಮನೋಹರ ಧೀಮಂತ ಭಂಗಿಗಳನ್ನು ಪ್ರದರ್ಶಿಸಿ, ದೇಹದ ಮೇಲಿನ ನಿಯಂತ್ರಣದ ದೃಢತೆಯನ್ನು ಪ್ರಕಟಪಡಿಸಿದರು. ಜತಿ ಮತ್ತು ಸ್ವರಗಳ ಹದವಾದ ಸಮ್ಮಿಲನದಲ್ಲಿ ವಿಶಿಷ್ಟ ವಿನ್ಯಾಸದ ನವನೃತ್ತಗಳ ಬೆಡಗಿನಲ್ಲಿ `ಜತಿಸ್ವರ’ ವನ್ನು ನಿರಾಯಾಸವಾಗಿ ನಿರೂಪಿಸಿದರು ನಂದಕಿಶೋರ್.

ಮುಂದಿನ ಶ್ರೀರಾಮನ ಕುರಿತ `ರಾಘವಂ ಜಾನಕಿಪ್ರಿಯ’ ಎಂಬ ಅಭಿನಯಪ್ರಧಾನ  ‘ಶಬ್ದಂ’ ನಲ್ಲಿ ಸೀತಾ ಸ್ವಯಂವರ ಮತ್ತು ರಾಮ-ರಾವಣರ ಯುದ್ಧದ ಸಂಚಾರಿಯಲ್ಲಿ ಕಲಾವಿದನ ಅಭಿನಯ ಪ್ರಾವಿಣ್ಯ ಸುವ್ಯಕ್ತವಾಯಿತು. ರಾಮಾಯಣದ ಕೆಲ ಘಟನೆಗಳೊಂದಿಗೆ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಸಾತ್ವಿಕ ವ್ಯಕ್ತಿತ್ವದ ಸುಂದರಚಿತ್ರಣವನ್ನು ತಮ್ಮ ಸ್ಫುಟವಾದ ಆಂಗಿಕಾಭಿನಯ ಮತ್ತು ಭಾವಪೂರ್ಣ ಮುಖಾಭಿವ್ಯಕ್ತಿಯಿಂದ ಕಟ್ಟಿಕೊಟ್ಟರು.

ನೃತ್ಯಪ್ರಸ್ತುತಿಯ ಹೃದಯಭಾಗ, ಹಾಗೇ ಹೃದ್ಯವಾಗಿಯೂ ಮೂಡಿಬಂದ `ವರ್ಣ’ ದ ನೃತ್ಯ ಸಂಯೋಜನೆ ರುಕ್ಮಿಣಿದೇವಿ ಅರುಂಡೆಲ್. ನಾಯಕ, ತನ್ನ ಆರಾಧ್ಯದೈವ ನಾಟ್ಯಾಧಿಪತಿ ಶಿವನನ್ನು ಕುರಿತು ಭಕ್ತಿಭಾವದಿಂದ ‘ಮಾರಕೋಟಿ ಸುಂದರ’ ಎಂದು ತನ್ಮಯನಾಗಿ ಸ್ತುತಿಸುವ ಈ ದೈವೀಕ ಕೃತಿಯಲ್ಲಿ, ದೇವನ ಕಾರುಣ್ಯ ಬಯಸಿ, ಭಕ್ತತುಂದಿಲನಾದ ಭಕ್ತ, ತ್ಯಾಗರಾಜಸ್ವಾಮಿಯ ಮಹಿಮೆಯನ್ನು ಕೊಂಡಾಡುತ್ತಾ, ಅವನ ದರ್ಶನಕ್ಕೆ ಹಾತೊರೆದು ಭಕ್ತಿಯ ಪರಾಕಾಷ್ಠತೆಗೇರುತ್ತಾನೆ. ಸ್ವಾಮಿಯ ಬಗೆಗಿನ ತೀವ್ರ ಅಭೀಪ್ಸೆ ಗರಿಗಟ್ಟಿ ನಿಲ್ಲುವ ಈ ದೈನ್ಯದ ನೆಲೆಯಲ್ಲಿ ಕಲಾವಿದನ ಅಭಿನಯ (ಸುಶ್ರಾವ್ಯ ಗಾಯನ ಅಂದಗಾರ್ ನವೀನ್ -ಮೃದಂಗ ಜನಾರ್ಧನ ರಾವ್) ಅತ್ಯಂತ ಪರಿಣಾಮಕಾರಿಯಾಗಿತ್ತು. ಜೊತೆಗೆ ಶ್ಯಾಮ್ ಪ್ರಕಾಶರ ಹರಿತವಾದ ಶೊಲ್ಲುಕಟ್ಟುಗಳಿಗೆ ತಕ್ಕುದಾದ, ಕ್ಲಿಷ್ಟವಾದ ನೃತ್ತಗಳ ಲೀಲಾಜಾಲ ದೃಢ ನಿರ್ವಹಣೆ, ಅಸೀಮ ಸೌಂದರ್ಯಲಹರಿಯನ್ನು ಪಸರಿಸಿತ್ತು.

ಒಟ್ಟಾರೆ ಕರ್ನಾಟಕ ಸಂಗೀತ ಮತ್ತು ಮೃದಂಗವಾದನ ಬಲ್ಲ ತಾಳ-ಲಯಜ್ಞಾನ ಹೊಂದಿದ್ದ ಕಲಾವಿದ ನಂದಕಿಶೋರ್, ಸಂಕೀರ್ಣ ನೃತ್ತಗಳ ನಿರ್ವಹಣೆ ಹಾಗೂ ಪಕ್ವಾಭಿನಯದಲ್ಲಿ ಗೆದ್ದಿದ್ದರು. ಮುಂದಿನ `ಏನ ಬೇಡಲಿ ಹನುಮ ?”-ದೇವರನಾಮದ ಅಭಿನಯವೂ ಸುಭಗ-ಸುಂದರವಾಗಿ ಮೂಡಿಬಂದು, ಬೇಲೂರು ಚೆನ್ನಕೇಶವನ ಪ್ರಾರ್ಥನೆಯ ‘ತಿಲ್ಲಾನ’ದೊಂದಿಗೆ ಪ್ರಸ್ತುತಿ ಸಂಪನ್ನಗೊಂಡಿತು.

Related posts

ನೃತ್ಯದೊಡನೆ ಜ್ಞಾನವಿಕಾಸ-ಹೊಸ ಪ್ರಯೋಗ

YK Sandhya Sharma

ನಿಖಿತಳ ಚೈತನ್ಯಪೂರ್ಣ ಸುಮನೋಹರ ನೃತ್ಯ

YK Sandhya Sharma

ರಸಾನುಭವದ ರಸಸಂಜೆ- ನೀಲಾ ಮಾಧವ ನೃತ್ಯರೂಪಕ

YK Sandhya Sharma

Leave a Comment

This site uses Akismet to reduce spam. Learn how your comment data is processed.